ಮಟಪಾಡಿ(ಬ್ರಹ್ಮಾವರ): ವ್ಯಾವಹಾರಿಕತೆಯಿಂದ ಇಂದು ಯಕ್ಷಗಾನದ ಮೌಲ್ಯಗಳು ಕುಸಿಯುತ್ತಿವೆ. ಆದರೂ ಹವ್ಯಾಸಿ ಯಕ್ಷಗಾನ ಕಲಾಮಂಡಳಿಗಳಿಂದ ಯಕ್ಷಗಾನದ ಮೂಲ ಸ್ವರೂಪ ಇಂದಿಗೂ ಉಳಿದುಕೊಂಡಿದೆ ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದರು.ಮಟಪಾಡಿಯಲ್ಲಿ ಶನಿವಾರ ನಂದಿಕೇಶ್ವರ ಯಕ್ಷಗಾನ ಕಲಾ ಮಂಡಳಿ ವಾರ್ಷಿಕೋತ್ಸವ ಹಾಗೂ ಗುರುವೀರಭದ್ರ ನಾಯಕ್ ಸ್ಮಾರಕ ರಂಗ ಮಂಟಪ ಉದ್ಘಾಟಿಸಿ ಅವರು ಮಾತನಾಡಿದರು.
ಯಕ್ಷಗಾನದಲ್ಲಿ ಜನರ ಅಪೇಕ್ಷೆಗೆ ತಕ್ಕಂತೆ ಆಧುನಿಕತೆ ಅಳವಡಿಸಿಕೊಂಡರೂ ಯಕ್ಷಗಾನದ ಅಪೂರ್ವ ಕಲೆ ಮುಂದುವರಿಸಿಕೊಂಡು ಹೋಗಬೇಕು. ಕರಾವಳಿ ಜಿಲ್ಲೆಯ ಮಕ್ಕಳಲ್ಲಿ ಪ್ರಬುದ್ಧತೆ ಬೆಳೆಯಲು ಯಕ್ಷ ಶಿಕ್ಷಣ ಸಹಕಾರಿ. ಜಿಲ್ಲೆಯಾದ್ಯಂತ ಸುಮಾರು 48 ಶಾಲೆಗಳಲ್ಲಿ 1600 ವಿದ್ಯಾರ್ಥಿಗಳು ಯಕ್ಷ ಶಿಕ್ಷಣದಿಂದ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.
ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಎಚ್.ಶ್ರೀಧರ ಹಂದೆ, ಜಿ.ಪಂ.ಮಾಜಿ ಅಧ್ಯಕ್ಷ ಬಿ. ಭುಜಂಗ ಶೆಟ್ಟಿ, ಮಲ್ಪೆ ಉದ್ಯಮಿ ಪ್ರಮೋದ್ ಮಧ್ವರಾಜ್, ನೀಲಾವರ ಮಹಿಷಮರ್ದಿನಿ ದೇವಸ್ಥಾನ ಆಡಳಿತ ಮೊಕ್ತೇಸರ ಬೈಕಾಡಿ ಸುಪ್ರಸಾದ್ ಶೆಟ್ಟಿ, ಹಂದಾಡಿ ಗ್ರಾ.ಪಂ. ಉಪಾಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ತಾ.ಪಂ.ಸದಸ್ಯೆ ಉಷಾ ಕೃಷ್ಣ ಪೂಜಾರಿ, ಮಟಪಾಡಿ ಚಿತ್ತಾರಿ ನಂದಿಕೇಶ್ವರ ದೇವಸ್ಥಾನದ ಮೊಕ್ತೇಸರ ಎಂ.ಗಿರೀಶ್ಚಂದ್ರ ಆಚಾರ್ಯ, ಮಟಪಾಡಿ ಶ್ರೀನಿಕೇತನ ಪ್ರೌಢಶಾಲೆ ಮುಖ್ಯ ಶಿಕ್ಷಕ ಅಶೋಕ್ ಕುಮಾರ್ ಶೆಟ್ಟಿ, ಬ್ರಹ್ಮಾವರ ಅಜಪುರ ಕರ್ನಾಟಕ ಸಂಘ ಅಧ್ಯಕ್ಷ ಎಂ.ಲಕ್ಷ್ಮಣ ಗಾಣಿಗ, ಜಯ ಕುಮಾರ್, ಮಂಡಳಿ ಕಾರ್ಯದರ್ಶಿ ದಿನೇಶ್ ನಾಯಕ್, ಅಜಿತ್ ಕುಮಾರ್, ಶರಣ್ ಸಿಕ್ವೇರಾ ಮತ್ತಿತರರು ಇದ್ದರು. ಈ ಸಂದರ್ಭ ತೋನ್ಸೆ ಜಯಂತ್ ಕುಮಾರ್ ದಂಪತಿಯನ್ನು ಸನ್ಮಾನಿಸಲಾಯಿತು.