ಮುಂಬೈ (ಪಿಟಿಐ): ಲೇವಾದೇವಿ ವ್ಯವಹಾರದಲ್ಲಿ ತೆರಿಗೆ ವಂಚನೆ ಆರೋಪಿಯಾಗಿ ಇಲ್ಲಿನ ಅರ್ಥರ್ ಕಾರಾಗೃಹದಲ್ಲಿ ಬಂಧಿಯಾಗಿರುವ ಪುಣೆಯ ಕುದುರೆ ಸಾಕಾಣಿಕೆದಾರ ಹಸನ್ ಅಲಿ ಖಾನ್ ಪಾರ್ಶ್ವವಾಯುವಿನಿಂದ ಬಳಲುತ್ತಿರುವುದಾಗಿ ವಕೀಲರು ತಿಳಿಸಿದ್ದಾರೆ. ಆದರೆ ಜೈಲು ಆಡಳಿತ ಇದನ್ನು ನಿರಾಕರಿಸಿ, ಆತ ಆರೋಗ್ಯವಾಗಿರುವುದಾಗಿ ಹೇಳಿದೆ.
`ಅಲಿಯ ಬಲಗಾಲು ಮತ್ತು ಕೈ ಕಾರ್ಯನಿರ್ವಹಿಸದಿರುವುದು ಅರ್ಜಿಯೊಂದಕ್ಕೆ ಸಹಿ ಪಡೆಯುವಾಗ ತಿಳಿಯಿತು. ಆದರೆ ಕಾರಾಗೃಹ ವೈದ್ಯರು ಅಲಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲಿಗೆ ಇಂಜೆಕ್ಷನ್ ನೀಡಿದ್ದಾರಷ್ಟೇ~ ಎಂದು ವಕೀಲ ಐ.ಪಿ. ಬಗಾಡಿಯ ತಿಳಿಸಿದ್ದಾರೆ.