ಹಾಸನ: `ಕಾಲೇಜಿನ ಆವರಣದಲ್ಲಿ ಔಷಧೀಯ ಸಸ್ಯಗಳನ್ನು ನೆಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಜತೆಗೆ ಉತ್ತಮ ಪರಿಸರದಲ್ಲಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಸಹ ಪಡೆಯಬಹುದು~ ಎಂದು ವೈದ್ಯ ಡಾ. ಗುರುರಾಜ ಹೆಬ್ಬಾರ್ ನುಡಿದರು.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ವಿಭಾಗದವರು ಶನಿವಾರ ಏರ್ಪಡಿಸಿದ್ದ `ಹಸಿರು ವಲಯ ನಿರ್ಮಾಣ~ ಕಾರ್ಯಕ್ರಮವನ್ನು ಗಿಡನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
`ಸಸಿಗಳನ್ನು ನೆಡುವುದರ ಜತೆಗೆ ಅವುಗಳನ್ನು ಕಾಪಾಡಿಕೊಳ್ಳುವುದು ಅಗತ್ಯ~ ಎಂದು ಅವರು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಪರಿಸರವಾದಿ ಹೆಮ್ಮಿಗೆ ಮೋಹನ್ `ಪರಿಸರವನ್ನು ಉಳಿಸಿ ಬೆಳೆಸುವ ಜವಬ್ದಾರಿ ಇಂದಿನ ಯುವಕರ ಮೇಲಿದೆ~ ಎಂದು ಅವರು ಹೇಳಿದರು.
ಪರಿಸರವಾದಿ ಅನುಗನಾಳು ಕೃಷ್ಣಮೂರ್ತಿ `ಕಾಲೇಜಿನ ಪರಿಸರ ಉತ್ತಮವಾಗಿದ್ದರೆ ಆರೋಗ್ಯವಂತ ವಿದ್ಯಾರ್ಥಿಗಳನ್ನು ಸೃಷ್ಟಿಸಬಹುದು~ ಎಂದರು.
ಕಾಲೇಜಿನ ಆವರಣದಲ್ಲಿ ನೆಟ್ಟ ಸಸಿಗಳನ್ನು ಉಪನ್ಯಾಸಕರು ದತ್ತು ಪಡೆದುಕೊಂಡರು.
ಪ್ರಾಂಶುಪಾಲ ಪ್ರೊ. ವಿ. ಕೃಷ್ಣಪ್ಪ, ಸಾಂಸ್ಕೃತಿಕ ವೇದಿಕೆ ಕಾರ್ಯದರ್ಶಿ ಪ್ರೊ. ಕೆ. ಗುರುರಾಜು, ಎನ್ಎಸ್ ಎಸ್ ಅಧಿಕಾರಿ ಎಂ.ಕೆ. ಮಹೇಶ್, ಐ.ಕ್ಯೂ.ಎ.ಸಿ ಸಂಚಾಲಕ ಡಾ. ಡಿ. ಶ್ರೀನಿವಾಸ ಹಾಗೂ ಉಪನ್ಯಾಸಕರು ಹಾಜರಿದ್ದರು.