ಶಿಕಾರಿಪುರ: ಹೆಚ್ಚು ಇಳುವರಿ ಪಡೆಯಬೇಕು ಎನ್ನುವ ರೈತರ ಅತಿಯಾಸೆಯ ಫಲದಿಂದಾಗಿ ರಸಗೊಬ್ಬರ ಬಳಕೆ ಹೆಚ್ಚಾಗಿದ್ದು ಇದನ್ನು ಕಡಿಮೆ ಮಾಡುವುದು ಅಗತ್ಯವಾಗಿದೆ ಎಂದು ಕೃಷಿ ಅಧಿಕಾರಿ ಎ.ಎಸ್. ನೂರ್ಸಮದ್ ಹೇಳಿದರು.
ತಾಲ್ಲೂಕಿನ ಕಾಗಿನಲ್ಲಿ ಗ್ರಾಮದಲ್ಲಿ ಈಚೆಗೆ ಮಹಾತ್ಮಾಗಾಂಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ನಡೆದ `ಎರೆಹುಳು ಗೊಬ್ಬರ ತಯಾರಿಕೆ ತರಬೇತಿ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಣ್ಣಿನ ಫಲವತ್ತತೆ ಹೆಚ್ಚಳಕ್ಕೆ ರೈತರು ಹೆಚ್ಚಿನ ಗಮನ ನೀಡುವುದು ಅಗತ್ಯವಾಗಿದ್ದು ಇದಕ್ಕಾಗಿ ಸಾವಯವ ಗೊಬ್ಬರ, ಹಸಿರೆಲೆ ಗೊಬ್ಬರ, ಎರೆಹುಳು ಗೊಬ್ಬರ ಬಳಕೆ ಮಾಡಬೇಕು ಇದರ ತಯಾರಿಕೆ ಬಗ್ಗೆ ರೈತರಿಗೆ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ನಿವೃತ್ತ ಶಿಕ್ಷಕ ತೀರ್ಥಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಗಣಿ ಗೊಬ್ಬರ ಬಳಕೆ ಮಾಡುವುದು ಅತ್ಯಂತ ಹಳೆಯ ಸಂಪ್ರದಾಯವಾಗಿದ್ದು ಇಂತಹ ಪದ್ಧತಿಗೆ ರೈತರು ಮರಳಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಾತ್ಮಾಗಾಂಧಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಲೋಕೇಶ್, ಕೆಂಚಗೊಂಡನಕೊಪ್ಪ ಜಲಾನಯನ ಸಮಿತಿ ಅಧ್ಯಕ್ಷ ಷಣ್ಮುಖಪ್ಪ, ರೈತಕೂಟದ ಸದಸ್ಯರು, ಶೈಲಜಾ, ಪುಷ್ಪಾ, ಮಂಜುಳಾ, ಗ್ರಾಮದ ಸ್ವಸಹಾಯ ಸಂಘದ ಸದಸ್ಯರುಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.