ಆನೇಕಲ್: ಬನ್ನೇರುಘಟ್ಟ ಸಮೀಪದ ಮಂಟಪ ಗ್ರಾಮಕ್ಕೆ ಆಹಾರ ಹುಡುಕಿಕೊಂಡು ಮೂರು ಸಲಗಗಳು ಬಂದು ವಾಸ್ತವ್ಯ ಹೂಡಿ ಆತಂಕದ ವಾತಾವರಣ ಉಂಟಾಗಿತ್ತು.
ಶನಿವಾರ ರಾತ್ರಿ ಆಹಾರ ಅರಸಿ ಕಾಡಿನಿಂದ ಜಂಗಾಲಪಾಳ್ಯ, ಮಂಟಪ ಗ್ರಾಮಗಳಿಗೆ 3 ಸಲಗಗಳು ಬಂದಿವೆ. ಊರಿನ ಪಕ್ಕದಲ್ಲಿಯೇ ಇರುವ ರಾಗಿ ಮೆದೆಗಳನ್ನು ತಿನ್ನಲು ಆನೆಗಳು ಯತ್ನಿಸಿವೆ. ಕಾವಲು ಕಾಯುತ್ತಿದ್ದ ರೈತರು ಇದನ್ನು ಕಂಡು ಕೂಡಲೇ ಆನೆಗಳನ್ನು ಹಿಮ್ಮೆಟ್ಟಿಸಿದ್ದಾರೆ.
ನಂತರ ಆನೆಗಳು ಸಮೀಪದಲ್ಲಿದ್ದ ನೀಲಗಿರಿ ತೋಪಿನಲ್ಲಿ ಠಿಕಾಣಿ ಹೂಡಿದವು. ಆನೆಗಳಿರುವ ಸುದ್ದಿ ತಿಳಿಯುತ್ತಿದ್ದಂತೆ ಮುಂಜಾನೆ 4ರ ಸುಮಾರಿಗೆ ಮಂಟಪ, ಜಂಗಾಲಪಾಳ್ಯದ ಗ್ರಾಮಸ್ಥರು ನೀಲಗಿರಿ ತೋಪಿನ ಸುತ್ತಲೂ ಜಮಾಯಿಸಿದ್ದಾರೆ. ಜನರ ಆಗಮನದಿಂದ ಗಲಿಬಿಲಿಗೊಂಡು ಆನೆಗಳು ನೀಲಗಿರಿ ತೋಪಿನಿಂದ ಬೆಳಗಾದರೂ ಸಹ ಹೊರಗೆ ಬರಲೇ ಇಲ್ಲ. ಅಲ್ಲದೇ ನೀಲಗಿರಿ ತೋಪಿನಲ್ಲಿ ಮರಗಳನ್ನು ಸಂಪೂರ್ಣವಾಗಿ ಹಾಳುಮಾಡಿವೆ.
ಜನರ ಕೇಕೆ ಕೂಗಾಟಗಳಿಂದಾಗಿ ಆನೆಗಳು ಒಂದು ತೋಪಿನಿಂದ ಮತ್ತೊಂದು ತೋಪಿಗೆ ಓಡಲಾರಂಭಿಸಿದವು. ಆನೆಗಳು ಸಮೀಪ ಬಂದ ಜನರನ್ನು ಅಟ್ಟಿಸಿಕೊಂಡು ಹೋಗಿ, ಮರಳಿ ನೀಲಗಿರಿ ತೋಪಿನಲ್ಲಿ ವಾಸ್ತವ್ಯ ಹೂಡುತ್ತಿದ್ದವು. ಅರಣ್ಯ ಇಲಾಖೆ ಹಾಗೂ ಪೊಲೀಸರು ಜನರನ್ನು ನಿಯಂತ್ರಿಸಲು ಹರ ಸಾಹಸಪಡಬೇಕಾಯಿತು.