ಬೈಂದೂರು: ಕಾಂಗ್ರೆಸ್ ಜನರಿಗೆ ಹಲವು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದ್ದು, ಸಮಾಜದ ಅಂಚಿನಲ್ಲಿರುವವರ ಅಭಿವೃದ್ಧಿಗೆ ಅಧಿಕಾರ ಸ್ವೀಕರಿಸಿದ ಮರುಕ್ಷಣದಿಂದಲೇ ಚಾಲನೆ ನೀಡಲಾಗಿದೆ. ಅವುಗಳಲ್ಲಿ ಬಡಜನರ ಹಸಿವು ನಿವಾರಣೆಯ ಅಕ್ಕಿ ವಿತರಿಸುವ ಅನ್ನಭಾಗ್ಯ ಕಾರ್ಯಕ್ರಮ. ಈ ಮಹತ್ವಾಕಾಂಕ್ಷೆಯ ಯೋಜನೆಗೆ ರಾಜ್ಯದಾದ್ಯಂತ ಬುಧವಾರ ಚಾಲನೆ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆ ಹೇಳಿದರು.
ಬೈಂದೂರಿನ ರೋಟರಿ ಸಮುದಾಯ ಭವನದಲ್ಲಿ ಬುಧವಾರ `ಅನ್ನಭಾಗ್ಯ'ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಪಡಿತರ ಚೀಟಿ ವಿತರಣೆಯಲ್ಲಿ ಉಂಟಾಗಿರುವ ಗೊಂದಲ ಒಂದೆರಡು ತಿಂಗಳಿನಲ್ಲಿ ಪೂರ್ತಿಯಗಿ ಪರಿಹಾರವಾಗಲಿದೆ. ಬಡಜನರಿಗೆ ನಿವೇಶನ, ವಸತಿ ಒದಗಿಸುವ ಕಾರ್ಯಕ್ರಮವನ್ನೂ ಕನಿಷ್ಠ ಕಾಲಾವಧಿಯಲ್ಲಿ ಪೂರ್ಣಗೊಳಿಸಲಾಗುವುದು. ಆಯವ್ಯಯ ಪತ್ರದಲ್ಲಿ ಅಗತ್ಯ ಹಣ ಮೀಸಲಿರಿಸಿಕೊಂಡು ನಾಲ್ಕು ದಶಕಗಳ ಈ ಭಾಗದ ಬೇಡಿಕೆಯಾದ ಬೈಂದೂರು ತಾಲ್ಲೂಕು ರಚನೆ ಮಾಡಲಾಗುವುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ಗೋಪಾಲ ಪೂಜಾರಿ ಅಧಿಕಾರಿಗಳು ಜನರ ಸಮಸ್ಯೆ ಬಗೆಹರಿಸಲು ಸೂಕ್ತವಾಗಿ ಸ್ಪಂದಿಸಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಮುಂದಾಗಬೇಕು ಎಂದರು. ಆಹಾರ ಮತ್ತು ನಾಗರಿಕ ಪೂರೈಕೆ ಉಪ ತಹಶೀಲ್ದಾರ್ ತಿಪ್ಪೇಸ್ವಾಮಿ ಸ್ವಾಗತಿಸಿದರು. ವಿಶೇಷ ತಹಶೀಲ್ದಾರ್ ಎಂ.ಎ.ಖಾನ್ ವಂದಿಸಿದರು. ಶಿಕ್ಷಕ ಸುಧಾಕರ ಪಿ.ಬೈಂದೂರು ನಿರೂಪಿಸಿದರು.
ಜಿಲ್ಲಾಧಿಕಾರಿ ಡಾ.ಎಂ. ಟಿ.ರೇಜು, ಜಿಲ್ಲಾ ಪಂಚಾಯಿತಿ ಸದಸ್ಯೆ ಸುಪ್ರೀತಾ ದೀಪಕ್ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್. ರಾಜು ಪೂಜಾರಿ, ರಾಧಾ ಪೂಜಾರಿ, ವಿಜಯಕುಮಾರ ಶೆಟ್ಟಿ, ಅರುಣಕುಮಾರ್, ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಗೋಪಾಲ ಶೆಟ್ಟಿ ಇದ್ದರು.