ಬೆಂಗಳೂರು: ಕೊನೆಯ ಪಂದ್ಯದವರೆಗೂ ಉತ್ತಮ ಪ್ರದರ್ಶನ ನೀಡಿದ ಅಣ್ಣಾಮಲೈ ವಿ.ವಿ. ತಂಡದವರು ಜೈನ್ ವಿಶ್ವವಿದ್ಯಾಲಯ ಆಶ್ರಯದಲ್ಲಿ ಇಲ್ಲಿ ನಡೆದ ಅಖಿಲ ಭಾರತ ಕ್ರೀಡಾಕೂಟದ ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಆದರು.
ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ (ಕೆಎಸ್ಎಚ್ಎ) ಕ್ರೀಡಾಂಗಣದಲ್ಲಿ ಬುಧವಾರ ನಡೆದ ಫೈನಲ್ ಪಂದ್ಯದಲ್ಲಿ ಅಣ್ಣಾಮಲೈ 3-1ಗೋಲುಗಳಿಂದ ಚೆನ್ನೈನ ಡಿ.ಬಿ. ಜೈನ್ ಕಾಲೇಜು ತಂಡವನ್ನು ಮಣಿಸಿತು.
ವಿಜಯಿ ತಂಡದ ಮುರುಗನ್ 24ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಇದಕ್ಕೆ ತಿರುಗೇಟು ನೀಡಿದ ಜೈನ್ ತಂಡದ ಆರ್. ರಾಜಕುಮಾರ್ 42ನೇ ನಿಮಿಷದಲ್ಲಿ ಗೋಲು ಕಲೆ ಹಾಕಿದರು. ಆದರೆ, ಅಣ್ಣಾಮಲೈ ತಂಡದ ರಫೀಕ್ (58ನೇ ನಿ) ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸಿ ಮುನ್ನಡೆಯನ್ನು 2-1ಕ್ಕೆ ಹೆಚ್ಚಿಸಿದರು.
ಇದೇ ವೇಳೆ ಚುರುಕಿನ ಪ್ರದರ್ಶನ ನೀಡಿದ ಮನೋಜ್ (66ನೇ ನಿ) ಗೆಲುವಿನ ಅಂತರವನ್ನು 3-1ಕ್ಕೆ ಹೆಚ್ಚಿಸಿದರು. ಪಂದ್ಯದ ಮೊದಲಾರ್ಧದಲ್ಲಿ ವಿಜಯಿ ತಂಡ 1-0ರಲ್ಲಿ ಮುನ್ನಡೆ ಹೊಂದಿತ್ತು.
ಮೂರನೇ ಸ್ಥಾನಕ್ಕಾಗಿ ನಡೆದ ಹಣಾಹಣಿಯಲ್ಲಿ ಸೇಂಟ್ ಜೋಸೆಫ್ ಕಾಮರ್ಸ್ ಕಾಲೇಜು 4-3ಗೋಲುಗಳಿಂದ ಟೈ ಬ್ರೇಕರ್ನಲ್ಲಿ ಎಸ್ಬಿಎಂ ಜೈನ್ ಕಾಲೇಜು ಎದುರು ಗೆಲುವು ಪಡೆಯಿತು. ನಿಗದಿತ ಅವಧಿಯಲ್ಲಿ ಉಭಯ ತಂಡಗಳು ತಲಾ ಒಂದು ಗೋಲು ಗಳಿಸಿದ್ದವು.
ಎಸ್ಆರ್ಎಂಗೆ ಪ್ರಶಸ್ತಿ: ಎಸ್ಆರ್ಎಂ ತಂಡದವರು ಇದೇ ಕ್ರೀಡಾಕೂಟದ ವಾಲಿಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪ್ರಶಸ್ತಿ ಜಯಿಸಿದರು. ಈ ತಂಡ 25-21, 25-16, 21-25, 25-17, 15-10ರಲ್ಲಿ ಸತ್ಯಭಾಮಾ ತಂಡವನ್ನು ಸೋಲಿಸಿತು.