ಬೆಂಗಳೂರು: ಆರ್ಮಿ ಗ್ರೀನ್, ಕೆನರಾ ಬ್ಯಾಂಕ್ ಹಾಗೂ ಎಚ್ಎಎಲ್ ತಂಡದವರು ಕೊಡವ ಸಮಾಜ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ಆಶ್ರಯದಲ್ಲಿ ಆರಂಭವಾದ 15ನೇ ವರ್ಷದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ಹಾಕಿ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.
ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಆರ್ಮಿ ಗ್ರೀನ್ 4-2ಗೋಲುಗಳಿಂದ ಆರ್ಡಬ್ಲ್ಯುಎಫ್ ತಂಡವನ್ನು ಮಣಿಸಿತು. ವಿಜಯಿ ತಂಡದ ಜಾನ್ ಮೂರನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಇದೇ ಆಟಗಾರ 55ನೇ ನಿಮಿಷದಲ್ಲಿ ಮತ್ತೊಂದು ಗೋಲು ತಂದಿಟ್ಟರು. ಹೆಮ್ಲೆಟ್ (17ನೇ ನಿ.), ಜುಲ್ತಾನ್ (39ನೇ ನಿ) ಗೋಲು ಗಳಿಸಿದರು.
ಏಕಪಕ್ಷೀಯವಾಗಿ ಕೊನೆಗೊಂಡ ಇನ್ನೊಂದು ಪಂದ್ಯದಲ್ಲಿ ಕೆನರಾ ಬ್ಯಾಂಕ್ 3-0ಗೋಲುಗಳಿಂದ ಎಂಇಜಿ ಬಾಲಕರ ತಂಡವನ್ನು ಮಣಿಸಿತು. ಮುದ್ದಪ್ಪ ಎರಡು ಹಾಗೂ ಹತ್ತನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಕೆ.ಎಂ. ಸೋಮಣ್ಣ 39ನೇ ನಿಮಿಷದಲ್ಲಿ ಗೋಲು ತಂದಿಟ್ಟು ಕೆನರಾ ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು.
ಎಚ್ಎಎಲ್ ತಂಡದ ಮೊಹಮ್ಮದ್ ನಯೀಮುದ್ದೀನ್ ಹ್ಯಾಟ್ರಿಕ್ ಗೋಲು ಸೇರಿದಂತೆ ಒಟ್ಟು ಆರು ಗೋಲುಗಳನ್ನು ಕಲೆ ಹಾಕಿದರು. ಈ ಪರಿಣಾಮ ಎಚ್ಎಎಲ್ 10-3ಗೋಲುಗಳಿಂದ ಕೊಡವ ಸಮಾಜ ತಂಡವನ್ನು ಮಣಿಸಿತು.