ಬೆಂಗಳೂರು: ಎಂಇಜಿ ತಂಡದವರು ಇಲ್ಲಿ ನಡೆಯುತ್ತಿರುವ ಬೆಂಗಳೂರು ಕೊಡವ ಸಮಾಜ ಆಶ್ರಯದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ಹಾಕಿ ಟೂರ್ನಿಯ ಸೆಮಿಫೈನಲ್ ಲೀಗ್ಗೆ ಪ್ರವೇಶಿಸಿದರು.
ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಎಂಇಜಿ 2-0 ಗೋಲುಗಳಿಂದ ಸಿಒಇ ತಂಡವನ್ನು ಮಣಿಸಿತು.
ಸಗಾಯ್ ಜಯಶೀಲನ್ ಅವರು 14ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಎಂಇಜಿಗೆ ಮುನ್ನಡೆ ತಂದಿತ್ತರು. ಪಂದ್ಯದ 26ನೇ ನಿಮಿಷದಲ್ಲಿ ಮುತ್ತಣ್ಣ ಅವರು ಎರಡನೇ ಗೋಲು ಗಳಿಸಿ ಎಂಇಜಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಎರಡನೇ ಅವಧಿಯಲ್ಲಿ ಯಾವುದೇ ಗೋಲುಗಳು ದಾಖಲಾಗಲಿಲ್ಲ. ಎಂಇಜಿ ಆಟಗಾರರು ರಕ್ಷಣೆಗೆ ಹೆಚ್ಚಿನ ಒತ್ತು ನೀಡಿದ ಕಾರಣ ಸಿಒಇ ತಂಡಕ್ಕೆ ಮರುಹೋರಾಟ ನಡೆಸಲು ಆಗಲಿಲ್ಲ.
ಗುರುವಾರ ನಡೆಯುವ ಸೆಮಿಫೈನಲ್ ಲೀಗ್ ಪಂದ್ಯಗಳಲ್ಲಿ ಕೆನರಾ ಬ್ಯಾಂಕ್- ಎಂಇಜಿ (ಮಧ್ಯಾಹ್ನ 2.45ಕ್ಕೆ) ಮತ್ತು ಎಸ್ಎಐ- ಎಎಸ್ಸಿ (ಸಂಜೆ 4.00ಕ್ಕೆ) ತಂಡಗಳು ಪರಸ್ಪರ ಪೈಪೋಟಿ ನಡೆಸಲಿವೆ.