ಬೆಂಗಳೂರು: ಎಂ.ಬಿ. ಅಯ್ಯಪ್ಪ ತಂದಿತ್ತ ಎರಡು ಗೋಲುಗಳ ನೆರವಿನಿಂದ ಎಸ್ಎಐ ತಂಡದವರು ಇಲ್ಲಿ ನಡೆಯುತ್ತಿರುವ 15ನೇ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ಹಾಕಿ ಟೂರ್ನಿಯ ಪಂದ್ಯದಲ್ಲಿ ಸುಲಭ ಗೆಲುವು ಪಡೆದರು.
ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಎಸ್ಎಐ 4-0 ಗೋಲುಗಳಿಂದ ಪಿಸಿಟಿಸಿ ವಿರುದ್ಧ ಜಯ ಸಾಧಿಸಿತು. ಅಯ್ಯಪ್ಪ 11 ಹಾಗೂ 12ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ ಮಹತ್ವದ ಮುನ್ನಡೆ ತಂದಿತ್ತರು. ಇತರ ಎರಡು ಗೋಲುಗಳನ್ನು ಮನು ಪಾಟೀಲ್ (18) ಮತ್ತು ದರ್ಶನ್ (41) ಗಳಿಸಿದರು.
ಪ್ರಬಲ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ಬಿಇಎಂಎಲ್ 2-1 ಗೋಲುಗಳಿಂದ ಸೆಂಟ್ರಲ್ ಎಕ್ಸೈಸ್ ತಂಡವನ್ನು ಮಣಿಸಿತು. ಹರಿ ಗೋವಿಂದ್ 16ನೇ ನಿಮಿಷದಲ್ಲಿ ಬಿಇಎಂಎಲ್ಗೆ ಮೇಲುಗೈ ತಂದಿತ್ತರೆ, ಬೋಪಯ್ಯ 38ನೇ ನಿಮಿಷದಲ್ಲಿ ಗೋಲು ಗಳಿಸಿ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು.
ಮರುಹೋರಾಟ ನಡೆಸಿದ ಸೆಂಟ್ರಲ್ ಎಕ್ಸೈಸ್ ತಂಡ 58ನೇ ನಿಮಿಷದಲ್ಲಿ ಅಜಯ್ ಅಯ್ಯಪ್ಪ ತಂದಿತ್ತ ಗೋಲಿನ ನೆರವಿನಿಂದ ಹಿನ್ನಡೆಯನ್ನು 1-2ಕ್ಕೆ ತಗ್ಗಿಸಿತು. ಆ ಬಳಿಕ ಎಕ್ಸೈಸ್ ತಂಡ ಸಮಬಲದ ಗೋಲಿಗಾಗಿ ನಡೆಸಿದ ಎಲ್ಲ ಪ್ರಯತ್ನಗಳೂ ವಿಫಲವಾದವು.
ದಿನದ ಕೊನೆಯ ಪಂದ್ಯದಲ್ಲಿ ಎಎಸ್ಸಿ 3-0 ಗೋಲುಗಳಿಂದ ಆರ್ಡಬ್ಲ್ಯುಎಫ್ ವಿರುದ್ಧ ಸುಲಭ ಜಯ ದಾಖಲಿಸಿತು. ಸರಬ್ಜಿತ್ ಸಿಂಗ್ (23 ಮತ್ತು 57ನೇ ನಿ.) ಹಾಗೂ ಚಂದನ್ ಐಂದ್ (10) ವಿಜಯಿ ತಂಡದ ಪರ ಗೋಲು ಗಳಿಸಿದರು.
ಬುಧವಾರ ನಡೆಯುವ ಪಂದ್ಯಗಳಲ್ಲಿ ಕೆಎಸ್ಪಿ- ಎಂಇಜಿ, ಪಿಸಿಟಿಸಿ- ಎಂಇಜಿ ಬಾಯ್ಸ ಮತ್ತು ಡಿವೈಎಸ್ಎಸ್- ಆರ್ಮಿ ಇಲೆವೆನ್ ತಂಡಗಳು ಪೈಪೋಟಿ ನಡೆಸಲಿವೆ.