ಬೆಂಗಳೂರು: ಎಸ್ಎಎಐ ತಂಡದವರು ಇಲ್ಲಿ ನಡೆಯುತ್ತಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ಹಾಕಿ ಟೂರ್ನಿಯ ಪಂದ್ಯದಲ್ಲಿ 4-0 ಗೋಲುಗಳಿಂದ ಎಂಇಜಿ ಬಾಯ್ಸ ತಂಡವನ್ನು ಮಣಿಸಿದರು.
ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮನು ಪಾಟೀಲ್ (12ನೇ ನಿಮಿಷ), ದೀಪಕ್ (13ನೇ ನಿ.), ದರ್ಶನ್ (27ನೇ ನಿ.) ಮತ್ತು ಬಿಜು (44) ಅವರು ಎಸ್ಎಐ ಪರ ಗೋಲು ಗಳಿಸಿದರು.
ಎರಡನೇ ಪಂದ್ಯದಲ್ಲಿ ಎಂಇಜಿ `ಎ~ ತಂಡ 8-1 ಗೋಲುಗಳಿಂದ ಎಚ್ಎಎಲ್ ಎದುರು ಸುಲಭ ಜಯ ದಾಖಲಿಸಿತು. ವಿಜಯಿ ತಂಡದ ಪರ ಮೋನಿ ಮುತ್ತಣ್ಣ (7, 44 ಮತ್ತು 59), ಮುತ್ತಣ್ಣ (25, 49 ಮತ್ತು 52), ಎ. ಸಗಾಯ್ (3) ಹಾಗೂ ರಾಮಶಂಕರ್ (40) ಚೆಂಡನ್ನು ಗುರಿ ಸೇರಿಸಿದರು. ಎದುರಾಳಿ ತಂಡದ ಪರ ಮೊಹಮ್ಮದ್ ನಯೀಮುದ್ದೀನ್ (31) ಮಾತ್ರ ಗೋಲು ಗಳಿಸಲು ಯಶಸ್ವಿಯಾದರು.
ಡಿವೈಎಸ್ಎಸ್ ತಂಡ 7-1 ಗೋಲುಗಳಿಂದ ಆರ್ಡಬ್ಲ್ಯುಎಫ್ ವಿರುದ್ಧ ಜಯ ಸಾಧಿಸಿತು. ಸುಧಾಕರ್ (2 ಮತ್ತು 53), ಸಚಿನ್ ಮಲಾಡ್ (13), ಕುಶ (28 ಮತ್ತು 45), ಎಸ್. ಗೌಡ (51) ಮತ್ತು ಪಿ.ಎಸ್. ಚೆಂಗಪ್ಪ (57) ಡಿವೈಎಸ್ಎಸ್ ಪರ ಗೋಲು ಗಳಿಸಿದರೆ, ಆರ್ಡಬ್ಲ್ಯುಎಫ್ ತಂಡದ ಏಕೈಕ ಗೋಲನ್ನು ಚೇತನ್ ಕೃಷ್ಣ 48ನೇ ನಿಮಿಷದಲ್ಲಿ ತಂದಿತ್ತರು.
ದಿನದ ಕೊನೆಯ ಪಂದ್ಯದಲ್ಲಿ ಎಂಇಜಿ `ಬಿ~ 5-0 ಗೋಲುಗಳಿಂದ ಸೆಂಟ್ರಲ್ ಎಕ್ಸೈಸ್ ಎದುರು ಜಯ ಪಡೆಯಿತು. ಡಿ. ಮೂರ್ತಿ (23), ರಾಜೇಶ್ (34), ಗಣೇಶ್ ಕುಮಾರ್ (58), ರೋಹಿತ್ ಟಿರ್ಕಿ (52) ಹಾಗೂ ಜೂಲಿಯಸ್ ಹೆರೆಂಗ್ (56) ವಿಜಯಿ ತಂಡದ ಪರ ಚೆಂಡನ್ನು ಗುರಿ ಸೇರಿಸಿದರು. ಸೆಂಟ್ರಲ್ ಎಕ್ಸೈಸ್ ಗೋಲಿನ ಖಾತೆ ತೆರೆಯುವಲ್ಲಿ ವಿಫಲವಾಯಿತು.
ಮಂಗಳವಾರ ನಡೆಯುವ ಪಂದ್ಯಗಳಲ್ಲಿ ಎಸ್ಎಐ- ಪಿಸಿಟಿಸಿ, ಸೆಂಟ್ರಲ್ ಎಕ್ಸೈಸ್-ಬಿಇಎಂಎಲ್ ಹಾಗೂ ಎಎಸ್ಸಿ- ಆರ್ಡಬ್ಲ್ಯುಎಫ್ ತಂಡಗಳು ಪರಸ್ಪರ ಪೈಪೋಟಿ ನಡೆಸಲಿವೆ.