ಬೆಂಗಳೂರು: ಕರ್ನಾಟಕ ತಂಡ ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾದ ದಕ್ಷಿಣ ವಲಯ ರಾಷ್ಟ್ರೀಯ ಹಾಕಿ ಚಾಂಪಿಯನ್ಷಿಪ್ನ ಮೊದಲ ಪಂದ್ಯದಲ್ಲಿ 6-0 ಗೋಲುಗಳಿಂದ ಪುದುಚೇರಿ ಎದುರು ಗೆದ್ದು ಶುಭಾರಂಭ ಮಾಡಿತು.
ಏಕಪಕ್ಷೀಯವಾಗಿ ಕೊನೆಗೊಂಡ ಪಂದ್ಯದಲ್ಲಿ ಬಿಜು 7ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ನಂತರ ನವೀನ್ ಶೇಖರ್ (18ನೇ ನಿಮಿಷ), ನಯೀಮುದ್ದಿನ್ (33, 63 ಹಾಗೂ 69ನೇ ನಿಮಿಷ) ಗೋಲುಗಳನ್ನು ತಂದಿಟ್ಟು ಆತಿಥೇಯ ತಂಡದ ಗೆಲುವಿನ ಅಂತರ ಹೆಚ್ಚಿಸಿದರು. ಆರನೇ ಗೋಲನ್ನು ದೀಪಕ್ ಬಿಜ್ವಾಡ್ (62ನೇ ನಿ.)ಪೆನಾಲ್ಟಿ ಕಾರ್ನರ್ ಮೂಲಕ ಗಳಿಸಿದರು.
ಇನ್ನೊಂದು ಪಂದ್ಯದಲ್ಲಿ ಹೈದರಾಬಾದ್ 5-0ಗೋಲುಗಳಿಂದ ಕೇರಳ ಎದುರು ಜಯಿಸಿತು. ವಿಜಯಿ ತಂಡದ ಅರವಿಂದ್ (2 ಹಾಗೂ 52ನೇ ನಿ.), ವಿಜಯ್ ಕುಮಾರ್ (20, 44 ಮತ್ತು 68ನೇ ನಿ.) ಗೋಲು ಕಲೆ ಹಾಕಿದರು. ಮತ್ತೊಂದು ಪಂದ್ಯದಲ್ಲಿ ತಮಿಳುನಾಡು 8-2 ಗೋಲುಗಳಿಂದ ಆಂಧ್ರಪ್ರದೇಶ ಎದುರು ಗೆಲುವು ಪಡೆದು ಪೂರ್ಣ ಪಾಯಿಂಟ್ಸ್ ಸಂಗ್ರಹಿಸಿತು.
ಸೋಮವಾರದ ಪಂದ್ಯಗಳು: ಆಂಧ್ರ ಪ್ರದೇಶ-ಪುದುಚೇರಿ (ಮಧ್ಯಾಹ್ನ 1.30), ಕರ್ನಾಟಕ-ಕೇರಳ (ಮಧ್ಯಾಹ್ನ 3ಕ್ಕೆ) ಹಾಗೂ ಹೈದರಾಬಾದ್-ತಮಿಳುನಾಡು (ಸಂಜೆ 4.30).