ಬೆಂಗಳೂರು: ದೀಪಕ್ ತಂದಿತ್ತ ಮೂರು ಗೋಲುಗಳ ನೆರವಿನಿಂದ ತುಮಕೂರಿನ ಧ್ಯಾನ್ಚಂದ್ ಹಾಕಿ ಕ್ಲಬ್ ತಂಡ ಕೆಎಸ್ಎಚ್ಎ ರಾಜ್ಯ ‘ಸಿ’ ಡಿವಿಷನ್ ಹಾಕಿ ಲೀಗ್ ಚಾಂಪಿಯನ್ಷಿಪ್ನ ಪಂದ್ಯದಲ್ಲಿ ಸುಲಭ ಜಯ ಸಾಧಿಸಿತು.
ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಧ್ಯಾನ್ಚಂದ್ ಕ್ಲಬ್ 8-3 ಗೋಲುಗಳಿಂದ ಬಾಂಬರ್ಸ್ ಹಾಕಿ ಕ್ಲಬ್ ತಂಡವನ್ನು ಮಣಿಸಿತು. ದೀಪಕ್ ಪಂದ್ಯದ 1, 6 ಹಾಗೂ 24ನೇ ನಿಮಿಷದಲ್ಲಿ ಗೋಲು ಗಳಿಸಿದರು.
ತಂಡದ ಇತರ ಗೋಲುಗಳನ್ನು ನಾಗಸುಮನ್ (7, 32), ಉದಯ್ (30), ಮಂಜುನಾಥ್ (34) ಹಾಗೂ ಕೌಶಿಕ್ (47) ತಂದಿತ್ತರು. ಬಾಂಬರ್ಸ್ ಪರ ರೊವಿನ್ (15, 40) ಹಾಗೂ ಶರತ್ ಕುಮಾರ್ (5) ಗೋಲು ಗಳಿಸಿದರು.
ಅಯ್ಯಪ್ಪ ಹಾಕಿ ಸಂಸ್ಥೆ ‘ಬಿ’ ತಂಡ 3-2 ರಲ್ಲಿ ಧ್ಯಾನ್ಚಂದ್ ಹಾಕಿ ಕ್ಲಬ್ ವಿರುದ್ಧ ಜಯ ಪಡೆಯಿತು. ವಿಜಯಿ ತಂಡದ ಪರ ಹರ್ಷ (18, 49), ನಬೀಲ್ (34) ಹಾಗೂ ಎದುರಾಳಿ ತಂಡದ ಪರ ಪ್ರದೀಪ್ (2) ಮತ್ತು ಭರತ್ (35) ಗೋಲುಗಳನ್ನು ತಂದಿತ್ತರು.
ದಿನದ ಮತ್ತೊಂದು ಪಂದ್ಯದಲ್ಲಿ ಬಿಸಿವೈಎ 7-3 ಗೋಲುಗಳಿಂದ ಈಸ್ಟ್ ಇಂಡಿಯಾ ಹಾಕಿ ಕ್ಲಬ್ ತಂಡವನ್ನು ಸೋಲಿಸಿತು. ನಾಲ್ಕು ಗೋಲುಗಳನ್ನು ತಂದಿತ್ತ ಅನಿಲ್ (9, 18, 28, 29) ಬಿಸಿವೈಎ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇತರ ಗೋಲುಗಳನ್ನು ಜೈಕುಮಾರ್ (2, 14) ಹಾಗೂ ನಿತಿನ್ (23) ತಂದಿತ್ತರೆ, ಮತ್ತೊಂದು ಗೋಲು (40) ‘ಉಡುಗೊರೆ’ ರೂಪದಲ್ಲಿ ಲಭಿಸಿತು. ಈಸ್ಟ್ ಇಂಡಿಯಾ ಪರ ಚಂದ್ರ ಪ್ರಕಾಶ್ (20), ಶ್ರೀ ಮಂಜು (24) ಹಾಗೂ ಶ್ರೀನಿಧಿ (27) ಚೆಂಡನ್ನು ಗುರಿ ಸೇರಿಸುವಲ್ಲಿ ಯಶ ಕಂಡರು.