ನವದೆಹಲಿ (ಪಿಟಿಐ): ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಎರಡನೇ ಸ್ಥಾನ ಪಡೆದ ಭಾರತ ತಂಡದ ಮೂವರು ಆಟಗಾರರಿಗೆ ಹಾಕಿ ಇಂಡಿಯಾ ತಲಾ ಒಂದು ಲಕ್ಷ ರೂಪಾಯಿ ಬಹುಮಾನ ಪ್ರಕಟಿಸಿದೆ.
ಟೂರ್ನಿಯ ‘ಅತ್ಯುತ್ತಮ ಆಟಗಾರ’ ಪ್ರಶಸ್ತಿ ಪಡೆದ ಕರ್ನಾಟಕದ ವಿ.ಆರ್.ರಘುನಾಥ್, ‘ಅತ್ಯುತ್ತಮ ಗೋಲ್ ಕೀಪರ್’ ಎನಿಸಿದ ಕೇರಳದ ಪಿ.ಆರ್.ಶ್ರೀಜೇಶ್ ಹಾಗೂ ಪದಾರ್ಪಣೆ ಪಂದ್ಯದಲ್ಲಿ ಗೋಲು ಗಳಿಸಿದ ರಮಣದೀಪ್ ಸಿಂಗ್ ಅವರು ತಲಾ ಒಂದು ಲಕ್ಷ ರೂಪಾಯಿ ಪಡೆಯಲಿದ್ದಾರೆ.
‘ಎರಡನೇ ಸ್ಥಾನ ಪಡೆದ ತಂಡಕ್ಕೆ ಅಭಿನಂದನೆ. ಈ ಟೂರ್ನಿಯ ಎರಡು ವೈಯಕ್ತಿಕ ಪ್ರಶಸ್ತಿಗಳು ನಮ್ಮ ತಂಡದ ಪಾಲಾಗಿದೆ. ಇದು ನಮ್ಮ ಪ್ರದರ್ಶನ ಮಟ್ಟಕ್ಕೆ ಉದಾಹರಣೆ’ ಎಂದು ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ನರೀಂದರ್ ಬಾತ್ರಾ ತಿಳಿಸಿದ್ದಾರೆ.