ಬೆಂಗಳೂರು: ಕರ್ನಾಟಕ ಹಾಗೂ ತಮಿಳುನಾಡು ತಂಡಗಳ ನಡುವೆ ಶುಕ್ರವಾರ ನಡೆದ ದಕ್ಷಿಣ ವಲಯ ರಾಷ್ಟ್ರೀಯ ಹಾಕಿ ಚಾಂಪಿಯನ್ಷಿಪ್ನ ಕೊನೆಯ ಲೀಗ್ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿತು. ಆದರೂ, ಹೆಚ್ಚು ಗೋಲು ಗಳಿಸಿರುವ ಆತಿಥೇಯರು ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆದುಕೊಂಡರು.
ಅಕ್ಕಿ ತಿಮ್ಮನಹಳ್ಳಿ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ತಲಾ 2 ಗೋಲು ಗಳಿಸಿ 13 ಪಾಯಿಂಟ್ಸ್ನಿಂದ ಸಮಬಲ ಸಾಧಿಸಿದವು. ಆತಿಥೇಯ ತಂಡದ ಡಿ.ಎಸ್. ದರ್ಶನ್ ಹಾಗೂ ನಾಯಕ ಹರಿಪ್ರಸಾದ್ ಜಿ.ಎಂ. ಕ್ರಮವಾಗಿ 12 ಮತ್ತು 30ನೇ ನಿಮಿಷದಲ್ಲಿ ಗೋಲು ತಂದಿತ್ತರು.
ರಾಷ್ಟ್ರೀಯ ಹಾಕಿ ಚಾಂಪಿಯನ್ಷಿಪ್ ಬೆಂಗಳೂರು ಅಥವಾ ಮುಂಬೈಯಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಮೂಲಗಳು ತಿಳಿಸಿವೆ. ಆದರೆ, ಈ ಕುರಿತು ಅಂತಿಮ ತೀರ್ಮಾನ ಕೈಗೊಂಡಿಲ್ಲ.
ಮಹಮ್ಮದ್ ನಯೀಮುದ್ದಿನ್ (ಗರಿಷ್ಠ ಗೋಲು, ಕರ್ನಾಟಕ), ಕಮಲ್ ಕಣ್ಣನ್ (ಪುದುಚೇರಿ, ಗಮನಾರ್ಹ ಪ್ರದರ್ಶನ ನೀಡಿದವರು) ಗೌರವಕ್ಕೆ ಪಾತ್ರರಾದರು. ಚಾಂಪಿಯನ್ಷಿಪ್ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದಕ್ಕೆ ಕರ್ನಾಟಕದ ಗೋಲ್ ಕೀಪರ್ ಜಗದೀಪ್ ದಯಾಳ್ ಅವರಿಗೆ ಟಿವಿಎಸ್ ಗ್ರೂಪ್ ಕಂಪೆನಿ ಮೋಟಾರ್ ಬೈಕನ್ನು ನೀಡಿತು.