ಧಾರವಾಡ: ತೀವ್ರ ಜಿದ್ದಾಜಿದ್ದಿನಿಂದ ಕೂಡಿದ, ಮುಕ್ತಾಯದ ಹಂತದಲ್ಲಿ ಆಟಗಾರರು ಕೈಕೈ ಮಿಲಾಯಿಸಿದ ಪಂದ್ಯದಲ್ಲಿ ಹುಬ್ಬಳ್ಳಿಯ ವಾಸು ಇಲೆವೆನ್ ತಂಡ ಇಲ್ಲಿನ ಓಂ ಸಾಯಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದ ಪುರುಷರ ಅಖಿಲ ಭಾರತ ಆಹ್ವಾನಿತ ಹಾಕಿ ಟೂರ್ನಿಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಕರ್ನಾಟಕ ಕಾಲೇಜು ಮೈದಾನದಲ್ಲಿ ಬುಧವಾರ ನಡೆದ ಫೈನಲ್ ಪಂದ್ಯದಲ್ಲಿ ವಾಸು ಇಲೆವೆನ್, ಆತಿಥೇಯರನ್ನು ಏಕೈಕ ಗೋಲಿನಿಂದ ಮಣಿಸಿ ಟ್ರೋಫಿಯನ್ನು ಎತ್ತಿ ಹಿಡಿಯಿತು.
ಪಂದ್ಯದುದ್ದಕ್ಕೂ ಉಭಯ ತಂಡಗಳ ಆಟಗಾರರು ಸಮಬಲದ ಹೋರಾಟ ಪ್ರದರ್ಶಿಸಿದರು. ದ್ವಿತೀಯಾರ್ಧದಲ್ಲಿ (47ನೇ ನಿಮಿಷ) ಶಶಿಧರ ಗಳಿಸಿದ ಗೋಲಿನಿಂದ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಹಬ್ಬಳ್ಳಿ ತಂಡದವರು ಪರಿಣಾಮಕಾರಿ ರಕ್ಷಣಾತ್ಮಕ ಆಟ ಪ್ರದರ್ಶಿಸಿ ಜಯಲಕ್ಷ್ಮಿಯನ್ನು ಒಲಿಸಿಕೊಂಡರು.
ಪಂದ್ಯದ ಮುಕ್ತಾಯದ ಹಂತದಲ್ಲಿ ಎರಡೂ ತಂಡಗಳ ಆಟಗಾರರು ಜಗಳವಾಡಿದ್ದರಿಂದ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಸಂಘಟಕರು ಹಾಗೂ ಹಿರಿಯರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.