ಬೆಂಗಳೂರು: ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ಎಐ) ತಂಡದವರು ಕೊಡವ ಸಮಾಜ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ಆಶ್ರಯದಲ್ಲಿ ನಡೆಯುತ್ತಿರುವ 15ನೇ ವರ್ಷದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ಹಾಕಿ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಎಸ್ಎಐ 3-1ಗೋಲುಗಳಿಂದ ಕೆನರಾ ಬ್ಯಾಂಕ್ ತಂಡವನ್ನು ಸೋಲಿಸಿತು. ಈ ಮೂಲಕ ಪ್ರಶಸ್ತಿ ಸನಿಹ ಹೆಜ್ಜೆ ಹಾಕಿತು.
ವಿಜಯಿ ತಂಡದ ದೀಪಕ್ ಆರನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಇದಕ್ಕೆ ಸಾಥ್ ನೀಡಿದ ಅಯ್ಯಪ್ಪ ಹಾಗೂ ಬಿಜು ಕ್ರಮವಾಗಿ 40 ಮತ್ತು 46ನೇ ನಿಮಿಷದಲ್ಲಿ ಗೋಲು ತಂದಿಟ್ಟರು. ಕೆನರಾ ತಂಡದ ಪರ ಏಕೈಕ ಗೋಲನ್ನು ಮುದ್ದಪ್ಪ 56ನೇ ನಿಮಿಷದಲ್ಲಿ ಗಳಿಸಿದರು.
ಆರಂಭಿಕ ಮುನ್ನಡೆ ಸಾಧಿಸಿದರೂ, ಎಎಸ್ಸಿ ತಂಡ ದಿನದ ಇನ್ನೊಂದು ಪಂದ್ಯದಲ್ಲಿ 3-4ಗೋಲುಗಳಿಂದ ಡಿವೈಎಸ್ಎಸ್ ಎದುರು ಸೋಲು ಕಂಡಿತು.
ವಿರಾಮದ ವೇಳೆಗೆ ಉಭಯ ತಂಡಗಳು 2-2ರಲ್ಲಿ ಸಮಬಲ ಸಾಧಿಸಿದ್ದವು. ಡಿವೈಎಸ್ಎಸ್ನ ಕುಶ್ (17ನೇ ನಿಮಿಷ), ಸಹದೇವಪ್ಪ (32ನೇ ನಿ.) ಮತ್ತು ಎಎಸ್ಸಿಯ ಎ. ಚಾಂದ್ (9 ಹಾಗೂ 29ನೇ ನಿ.) ಇದಕ್ಕೆ ಕಾರಣರಾದರು.
ದ್ವಿತೀಯಾರ್ಧದಲ್ಲಿ ವಿಜಯಿ ತಂಡದ ಸಚಿನ್ ಮಲ್ಲದ್ ಹಾಗೂ ಸುಧಾಕರ್ ಕ್ರಮವಾಗಿ 47 ಮತ್ತು 59ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಗೆಲುವು ತಂದುಕೊಟ್ಟರು.ಡಿವೈಎಸ್ಎಸ್ನ ಹರ್ಪಿತ್ ಸಿಂಗ್ 40ನೇ ನಿಮಿಷದಲ್ಲಿ ಗೋಲು ತಂದಿಟ್ಟು ಸೋಲಿನ ದವಡೆಯಿಂದ ತಂಡವನ್ನು ಪಾರು ಮಾಡಲು ಯತ್ನಿಸಿದರು. ಆದರೆ, ಸಾಧ್ಯವಾಗಲಿಲ್ಲ.
ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್ಪಿ), ಎಂಇಜಿ ಹಾಗೂ ಆರ್ಮಿ ಗ್ರೀನ್ ತಂಡಗಳು ಸಹ ನಾಲ್ಕರ ಘಟ್ಟ ಪ್ರವೇಶಿಸಿವೆ.
ಶುಕ್ರವಾರದ ಸೆಮಿಫೈನಲ್ ಪಂದ್ಯಗಳು: ಕೆಎಸ್ಪಿ-ಎಂಇಜಿ (ಮಧ್ಯಾಹ್ನ 2ಗಂಟೆಗೆ), ಎಸ್ಎಐ-ಆರ್ಮಿ ಗ್ರೀನ್ (ಸಂಜೆ 4ಕ್ಕೆ).