`ಐದು ಸಾವಿರ ರೂಪಾಯಿ! ಒಂದು ಸಾರಿ... ಎರಡು ಸಾರಿ...~ ಹರಾಜು ಶುರುವಾದಾಗ ಅಲ್ಲಿದ್ದ ಕೆಲವರಿಗೆ ಅಚ್ಚರಿ. ಚಿತ್ರಸಾಹಿತಿ ಕವಿರಾಜ್ ಮುಖದಲ್ಲಿ ಕುತೂಹಲದ ಗೆರೆಗಳು. ಯಾಕೆಂದರೆ, ಹರಾಜಾಗುತ್ತಿದ್ದದ್ದು ಅವರು ಬರೆದ ಹಾಡಿನ ಸಾಹಿತ್ಯದ ಪ್ರತಿ.
`ಮೊದಲ ಮಿಂಚು~ ಆಡಿಯೋ ಬಿಡುಗಡೆ ಸಮಾರಂಭದ ಹೈಲೈಟ್ ಈ ಹರಾಜು ಪ್ರಕ್ರಿಯೆ. `ತಿರುಗಿ ತಿರುಗಿ ನೋಡಲೇ~ ಎಂಬ ಹಾಡಿನ ಪ್ರತಿ ಕೊನೆಗೆ ಹರಾಜಾದದ್ದು 15 ಸಾವಿರ ರೂಪಾಯಿಗೆ. ಕನ್ನಡ ಚಿತ್ರಗೀತೆಯೊಂದನ್ನು ಬರೆಯಲು 75 ಸಾವಿರ ರೂಪಾಯಿವರೆಗೆ ಸಂಭಾವನೆ ನೀಡುವ ಈ ಕಾಲಮಾನದಲ್ಲಿ ಇದೇನೂ ದೊಡ್ಡ ಮೊತ್ತವಲ್ಲ ಎಂದು ಕೆಲವರಿಗೆ ಅನ್ನಿಸಿದ್ದೇನೋ ನಿಜ. ಆದರೆ, ಸಂಭಾವನೆಗೂ ಈ ಹರಾಜಿಗೂ ಸಂಬಂಧವಿಲ್ಲ. ಹಾಡಿನಿಂದ ಬಂದ 15 ಸಾವಿರ ರೂಪಾಯಿಯು ಸಹಾರಾ ಅನಾಥಾಶ್ರಮದ ಸಿಬ್ಬಂದಿಗೆ ಸಂದಿತು.
ಇತ್ತೀಚೆಗೆ ಅನೇಕರು ಆಡಿಯೋ ಬಿಡುಗಡೆ ಸಮಾರಂಭಗಳನ್ನು ಅದ್ದೂರಿಯಾಗಿ ಮಾಡುತ್ತಿರುವಾಗ `ಮೊದಲ ಮಿಂಚು~ ಚಿತ್ರದ ರೂವಾರಿ ವೆಸ್ಲೆ ಬ್ರೌನ್ ಈ ರೀತಿ ಸೃಜನಶೀಲತೆ ತೋರಿದ್ದು ಅರ್ಥಪೂರ್ಣ. ಹೊಸಕೋಟೆಯ ಸದಾನಂದ ಎಂಬುವರು ಕವಿರಾಜ್ ಬರೆದ ಸಾಹಿತ್ಯವನ್ನು ಅತಿ ಹೆಚ್ಚು ಮೊತ್ತದ ಹರಾಜು ಕೂಗಿ ಗಿಟ್ಟಿಸಿಕೊಂಡರು.
`ಗಂಭೀರ ಸಾಹಿತ್ಯವನ್ನು ಹರಾಜು ಹಾಕಿದರೆ ಒಳ್ಳೆಯ ಬೆಲೆ ಸಿಗುವುದರಲ್ಲಿ ಅನುಮಾನವಿಲ್ಲ. ಚಿತ್ರಸಾಹಿತ್ಯಕ್ಕೂ ಇಂಥದೊಂದು ಗೌರವ ಸಂದಿರುವುದು ಅಪರೂಪ, ಆಶ್ಚರ್ಯ~ ಎಂದು ಕವಿರಾಜ್ ಹುಬ್ಬೇರಿಸಿದರು.
ಚಿತ್ರದಲ್ಲಿ ಎಂಟು ಜವಾಬ್ದಾರಿಗಳನ್ನು ನಿರ್ವಹಿಸಿರುವ ವೆಸ್ಲೆ ಬ್ರೌನ್ ಅದು ಕೂಡ ದಾಖಲೆಯಾಗಲಿದೆ ಎಂದು ಹೇಳಿಕೊಂಡರು. ಆ್ಯಷ್ಲೆ-ಅಭಿಲಾಷ್ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದು, ಅವರಿಗೆ ದಿನೇದಿನೇ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವುದು ಖುಷಿ ತಂದಿದೆ.
ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಎದ್ದುಕಂಡ ಇನ್ನೊಂದು ಅಂಶ- ಗಾಯಕ, ಗಾಯಕಿಯರ ಉಪಸ್ಥಿತಿ. ಹೇಮಂತ್, ಲಕ್ಷ್ಮಿ ಮತ್ತಿತರ ಹಾಡುಗಾರರು ಸಂಭ್ರಮದಲ್ಲಿ ಎಲ್ಲರೊಳಗೆ ಒಂದಾದರು.
ಸುಪ್ರೀತಾ, ಸಿ.ಜಯರಾಜ್, ಅಭಿರಾಮ್ ಸೇರಿದಂತೆ ಚಿತ್ರದ ತಾರಾಬಳಗದ ಎಲ್ಲರೂ ತಂತಮ್ಮ ಅನುಭವವನ್ನು ಚುಟುಕಾಗಿ ಹಂಚಿಕೊಂಡರು. ಆನಂದ್ ಆಡಿಯೋದ ಮೋಹನ್,ಕರಿಸುಬ್ಬು ಅತಿಥಿಗಳ ಸಾಲಿನಲ್ಲಿ ಎದ್ದುಕಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.