ಚಾಮರಾಜನಗರ: ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ತೋಟಗಾರಿಕೆ ಬೆಳೆಗಳ ಸಂಸ್ಕರಣೆ ಮತ್ತು ಮಾರಾಟ ಸಹಕಾರ ಸಂಘದಿಂದ(ಹಾಪ್ಕಾಮ್ಸ) ತಾಜಾ ಹಣ್ಣು ಹಾಗೂ ಜ್ಯೂಸ್ ಮಾರಾಟ ಕೇಂದ್ರ ಆರಂಭಿಸಲಾಗಿದೆ.
ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಿ.ಆರ್. ಗಿರೀಶ್ ಮಾತನಾಡಿ, ಜಿಲ್ಲಾಡಳಿತ ಭವನದಲ್ಲಿ ತಾಜಾ ಹಣ್ಣಿನ ಮಳಿಗೆಯ ಆವಶ್ಯಕತೆ ಯಿತ್ತು. ಇಲ್ಲಿಗೆ ಬರುವ ಅಧಿಕಾರಿಗಳು, ನೌಕರರು ಹಾಗೂ ಸಾರ್ವಜನಿಕರಿಗೆ ಉತ್ತಮ ಪೋಷಕಾಂಶಯುಕ್ತ ತಾಜಾ ಹಣ್ಣು ಹಾಗೂ ಹಣ್ಣಿನ ರಸ ದೊರೆಯುತ್ತದೆ. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಹಾಪ್ಕಾಮ್ಸನ ಈ ಪ್ರಯತ್ನಕ್ಕೆ ಜನರು ಹೆಚ್ಚಿನ ಸಹಕಾರ ನೀಡಬೇಕು ಎಂದರು.
ಹಾಪ್ಕಾಮ್ಸ ನಿರ್ದೇಶಕ ಎನ್.ಆರ್. ಪುರುಷೋತ್ತಮ್ ಮಾತನಾಡಿ, ಜಿಲ್ಲೆಯ ರೈತರು ಹಾಗೂ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಹಾಪ್ಕಾಮ್ಸ ಕಾರ್ಯ ನಿರ್ವಹಿಸುತ್ತಿದೆ. ತರಕಾರಿ ಹಾಗೂ ಹಣ್ಣು ಬೆಳೆದ ರೈತರಿಗೆ ನ್ಯಾಯಯುತ ಬೆಲೆ ಕೊಡಿಸಲಿದೆ. ರಾಜ್ಯ ಹಾಪ್ಕಾಮ್ಸ ನಿಗದಿಪಡಿಸಿದ ಬೆಲೆಯಲ್ಲಿ ಹಣ್ಣು ಹಾಗೂ ತರಕಾರಿ ಮಾರಾಟ ಮಾಡಲಾಗುತ್ತಿದೆ. ರೈತರ ಸಂಸ್ಥೆಯಾದ ಹಾಪ್ಕಾಮ್ಸ ಪ್ರಗತಿಗೆ ಜನರು ಹೆಚ್ಚಿನ ಸಹಕಾರ ನೀಡಬೇಕು ಎಂದು ಹೇಳಿದರು.
ಹಾಪ್ಕಾಮ್ಸ ವ್ಯವಸ್ಥಾಪಕ ಡಾ.ಆನಂದ್ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಈಗಾಗಲೇ 4 ಮಳಿಗೆ ಆರಂಭಿಸಲಾಗಿದೆ. ಹಣ್ಣು ಹಾಗೂ ತರಕಾರಿ ಮಾರಾಟ ಮಾಡಲಾಗು ತ್ತಿದೆ. ಜಿಲ್ಲಾಧಿಕಾರಿ ಅವರಿಂದ ಅನುಮತಿ ಪಡೆದು ಈ ಮಳಿಗೆ ಆರಂಭಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಾಪ್ಕಾಮ್ಸ ನಿರ್ದೇಶಕರಾದ ಶಿವಮೂರ್ತಿ, ತಮ್ಮಡಹಳ್ಳಿ ರವಿಶಂಕರ್, ಲತಾ ಜಯಣ್ಣ, ರಾಜಶೇಖರಮೂರ್ತಿ, ಅಧಿಕಾರಿ ಯತಿರಾಜ್, ರಮೇಶ್, ಸಿದ್ದಪ್ಪಾಜಿ ಹಾಜರಿದ್ದರು.