ಮಾಲೂರು: ಮಾಂಸಕ್ಕಾಗಿ ಬಾವಲಿ ಬೇಟೆ ಎಗ್ಗಿಲ್ಲದೆ ನಡೆಯುತ್ತಿರುವ ಇಂದಿನ ದಿನಗಳಲ್ಲಿ, ತಾಲ್ಲೂಕಿನ ಹಾರೋಹಳ್ಳಿ ಗ್ರಾಮಸ್ಥರು ಗ್ರಾಮದ ಅರಳಿ ಮರದಲ್ಲಿ ಇರುವ ಬಾವಲಿಗಳನ್ನು ಪೂಜ್ಯ ಭಾವನೆಯಿಂದ ರಕ್ಷಿಸುತ್ತಿದ್ದಾರೆ.
ರಾತ್ರಿ ವೇಳೆ ತುತ್ತು ಅರಸಿ ಹೊರಡುವ ಸಸ್ತನಿಗಳು ಹತ್ತಿ, ಅರಳಿ, ಆಲದ ಹಣ್ಣು ತಿಂದು ಹೊಟ್ಟೆ ತುಂಬಿಸಿಕೊಂಡು ಬೆಳಗಾಗುವುದರೊಳಗೆ ತಮ್ಮ ನೆಲೆ ಸೇರಿಕೊಳ್ಳುತ್ತವೆ.
ಗ್ರಾಮದ ಹೃದಯ ಭಾಗದಲ್ಲಿನ ಅರಳಿ ಮರ ಬಾವಲಿಗಳಿಗೆ ಆಶ್ರಯ ತಾಣವಾಗಿದ್ದು, ಗ್ರಾಮಸ್ಥರು ಪ್ರತಿ ಪೌರ್ಣಮಿ ಮತ್ತು ಅಮಾವಾಸೆ ದಿನಗಳಲ್ಲಿ ಮರಕ್ಕೆ ವಿಶೇಷ ಪೂಜೆ ಮಾಡುತ್ತಾರೆ. ಕಾರಣ ಅರಳಿ ಮರದಲ್ಲಿ ಶಕ್ತಿ ದೇವತೆ ಇರುವುದೆಂಬ ನಂಬಿಕೆಯಿಂದ ಮರದಲ್ಲಿನ ಬಾವಲಿ ಮುಟ್ಟಿದರೆ ಕೆಡಕು ಉಂಟಾಗುತ್ತದೆ ಎಂಬ ನಂಬಿಕೆಯಿಂದ ಗ್ರಾಮಸ್ಥರೇ ಬಾವಲಿಗಳನ್ನು ಬೇಟೆಗಾರರಿಂದ ರಕ್ಷಿಸುತ್ತಿದ್ದಾರೆ.
ಬಾವಲಿ ಮಾಂಸ ರುಚಿಗೆ ಖ್ಯಾತಿ. ನಾಟಿ ವೈದ್ಯರು ಕೆಲ ರೋಗಗಳಿಗೆ ಇದನ್ನು ಔಷಧಿಯನ್ನಾಗಿ ಸಲಹೆ ಮಾಡುವುದರಿಂದ ಬೇಟೆಗಾರರು ಬಲೆಯಿಂದ ಹಾಗೂ ಬಂದೂಕಿನಿಂದ ಬೇಟೆಯಾಡುತ್ತಾರೆ. ಆದ್ದರಿಂದ ಈಚಿನ ದಿನಗಳಲ್ಲಿ ಅವುಗಳ ಸಂತತಿ ಕ್ಷೀಣಿಸುತ್ತಿರುವುದಾಗಿ ಗ್ರಾಮದ ಹಿರಿಯ ಸಂಜೀವಪ್ಪ ಹೇಳಿದರು.
ಎತ್ತರದ ಅರಳಿ ಮರದಲ್ಲಿ ಹಲವು ದಶಕಗಳಿಂದ ನೆಲೆಕಂಡುಕೊಂಡಿರುವ ಈ ಅಪರೂಪದ ಸಸ್ತನಿಗಳು ಗ್ರಾಮದ ಶುಭ ಸೂಚಕ ಎಂದು ಅಜ್ಜಿ ಅಕ್ಕಮ್ಮ ತಿಳಿಸಿದರು.