ಬೆಂಗಳೂರು ಪೂರ್ವ ತಾಲ್ಲೂಕಿನ ಹಾಲನಾಯಕನಹಳ್ಳಿ ಗ್ರಾಮದಲ್ಲಿ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ಹೋಗಿವೆ. ಕಳೆದ ವರ್ಷವಷ್ಟೇ ಇಲ್ಲಿನ ಮುಖ್ಯ ರಸ್ತೆ ಡಾಂಬರೀಕರಣಗೊಂಡಿತ್ತು.
ಆದರೆ ಈಗ ಅದರಲ್ಲಿ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣಗೊಂಡಿವೆ. ಮಳೆ ಬಂದಾಗ ನೀರು ತುಂಬಿಕೊಂಡರೆ, ಮಿಕ್ಕೆಲ್ಲಾ ದಿನಗಳಲ್ಲಿ ಧೂಳೇ ಧೂಳು. ಇದರಿಂದಾಗಿ ಸಾರ್ವಜನಿಕರು ನಿತ್ಯವೂ ಪ್ರಯಾಸದಿಂದ ಓಡಾಡುವಂತಾಗಿದೆ.
ಇದೇ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಇದೆ. ಅದರ ಮುಂದಿನ ರಸ್ತೆಯೇ ದೊಡ್ಡ ಹೊಂಡಗಳಿಂದ ಕೂಡಿದೆ. ಇದೇ ಗ್ರಾಪಂಗೆ ಸೇರಿದ ಎ.ಕೃಷ್ಣಪ್ಪ ನಗರದಲ್ಲಿ ಜಿಪಂ ವತಿಯಿಂದ ಇತ್ತೀಚೆಗಷ್ಟೇ ಅಭಿವೃದ್ಧಿಗೊಂಡ ಮುಖ್ಯ ರಸ್ತೆಯಲ್ಲಿನ ಜಲ್ಲಿ ಕಲ್ಲುಗಳು ಮೇಲೆದ್ದು ಬಂದಿವೆ. ಈ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ. ಇದು ಕಳಪೆ ಕಾಮಗಾರಿಗೆ ಸಾಕ್ಷಿ.
ಆದಷ್ಟು ಬೇಗನೆ ರಸ್ತೆ ದುರಸ್ತಿಗೊಳಿಸಿ ಹೊಸದಾಗಿ ಡಾಂಬರೀಕರಣ ಮಾಡಬೇಕು. ಮುಂದಿನ ದಿನಗಳಲ್ಲಿ ಇಂಥ ಕಳಪೆ ರಸ್ತೆಯಲ್ಲಿ ಅವಘಡಗಳು ನಡೆಯುವುದನ್ನು ತಪ್ಪಿಸಬೇಕು.