ನರಗುಂದ: ಪಟ್ಟಣದಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಚರಂಡಿಗಳು ತುಂಬಿ ಹರಿಯುತ್ತಿದ್ದು, ಅವುಗಳನ್ನು ಸಕಾಲದಲ್ಲಿ ಸ್ವಚ್ಛಗೊಳಿಸದ ಪರಿಣಾಮ ಸೊಳ್ಳೆಗಳ ತಾಣವಾಗಿ ಮಾರ್ಪಡುತ್ತಿವೆ. ಸವದತ್ತಿ ರಸ್ತೆ ಸಮೀಪ ಇರುವ ಹಾಲಭಾವಿ ಕೆರೆ ಇದಕ್ಕೆ ಪ್ರತ್ಯಕ್ಷ ಸಾಕ್ಷಿ.
ಸಕಾಲಕ್ಕೆ ಸ್ವಚ್ಛಗೊಳಿಸದ ಪರಿಣಾಮ ಇರುವ ಚರಂಡಿ ತುಂಬಿ ಹರಿಯುತ್ತಿವೆ. ಇದರಿಂದ ಈ ಓಣಿಯ ನಿವಾಸಿಗಳು ನಿತ್ಯ ಪುರಸಭೆಯನ್ನು ಶಪಿಸುತ್ತಿದ್ದಾರೆ. ಇದರಿಂದ ಈ ನಿವಾಸಿಗಳ ನರಕಯಾತನೆ ಸಾಮಾನ್ಯ ಎಂಬಂತಾಗಿದೆ.
ಇದಕ್ಕೆ ಪುರಸಭೆಯ ದಿವ್ಯ ನಿರ್ಲಕ್ಷ್ಯವೇ ಆಗಿದೆ. ಈ ಕುರಿತು ಪುರಸಭೆಗೆ ಹಲವಾರು ಸಲ ಮನವಿ ಮಾಡಿಕೊಂಡರೂ ಪ್ರಯೋಜನವಾಗುತ್ತಿಲ್ಲ ಎಂದು ಇಲ್ಲಿಯ ನಿವಾಸಿ ಮಹಾಂತವ್ವ ಗುರುಪಾದಶೆಟ್ಟರ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಈ ಓಣಿಯಲ್ಲಿ ಚರಂಡಿಗಳು ಸರಿಯಾಗಿ ನಿರ್ಮಾಣವಾಗಿಲ್ಲ. ಇದರಿಂದ ಕೆಲವೇ ದಿನಗಳಲ್ಲಿ ಈ ಚರಂಡಿಗಳು ತುಂಬಿ ಬಿಡುತ್ತವೆ. ತುಂಬಿದ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿ ಸಕಾಲಕ್ಕೆ ಆಗಮಿಸಿ ಸ್ವಚ್ಛಗೊಳಿಸುವುದೇ ಇಲ್ಲ. ಇದರಿಂದ ಇಲ್ಲಿ ದುರ್ವಾಸನೆ ಹರಡಿ ಇತ್ತ ಜನ ಸಂಚರಿಸಲು ಬರದಂತಾಗಿದೆ ಎಂದು ಇಲ್ಲಿಯ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಳ್ಳುವುದು ಸಾಮಾನ್ಯವಾಗಿದೆ.
‘ಪಟ್ಟಣದಲ್ಲಿ ಬಹುತೇಕ ಓಣಿಗಳಲ್ಲಿ, ಗಲ್ಲಿಗಳಲ್ಲಿ ಚರಂಡಿಗಳು ಸುವ್ಯವಸ್ಥಿತವಾಗಿ ನಿರ್ಮಾಣವಾಗಿದ್ದರೂ ಇಲ್ಲಿ ಏಕೆ ನಿರ್ಮಾಣವಾಗುತ್ತಿಲ್ಲ‘ ಎಂದು ಇಲ್ಲಿಯ ನಿವಾಸಿ ರುಕ್ಮಿಣಿ ಗಾಯಕವಾಡ ಪ್ರಶ್ನಿಸುತ್ತಾರೆ.
ಚರಂಡಿ ನೀರು ಅರ್ಧಕ್ಕೆ ಪೈಪ್ ಕಟ್ಟಿದ ಪರಿಣಾಮ ಆ ನೀರು ಮುಂದೆ ಹೋಗುವುದೇ ಇಲ್ಲ. ಜೊತೆಗೆ ರಸ್ತೆಗಳು ಸರಿಯಾಗಿರದ ಪರಿಣಾಮ ರಸ್ತೆ ಮಧ್ಯದಲ್ಲಿಯೇ ಚರಂಡಿ ನೀರು ನಿಲ್ಲುವ ಮೂಲಕ ಸೊಳ್ಳೆಗಳಿಗೆ ಆಶ್ರಯ ತಾಣವಾಗಿದೆ. ಸಂಜೆ ಹೊತ್ತು ಇಲ್ಲಿಯ ನಿವಾಸಿಗಳು ಹೊರಬರುವಂತಿಲ್ಲ. ಜೊತೆಗೆ ಮನೆಗಳಲ್ಲೂ ಹೆಚ್ಚಿನ ಸೊಳ್ಳೆಗಳು ಆವರಿಸುತ್ತಿರುವುದರಿಂದ ನಿದ್ದೆ ಮಾಡಲು ಪರದಾಡಬೇಕಾದ ಸ್ಥಿತಿ ಇಲ್ಲಿದೆ. ಬಸ್ ನಿಲ್ದಾಣಕ್ಕೆ ಅಣತಿ ದೂರದಲ್ಲಿರುವ ಈ ಓಣಿಯ ಬಗ್ಗೆ ಪುರಸಭೆ ನಿರ್ಲಕ್ಷ್ಯ ವಹಿಸಿರುವುದಕ್ಕೆ ನಿವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ.
‘ನಮ್ಮ ಗೋಳು ಯಾರು ಕೇಳುತ್ತಿಲ್ಲ. ಇಲ್ಲಿ ಸರಿಯಾದ ಮೂಲ ಸೌಲಭ್ಯಗಳೇ ಇಲ್ಲ. ಬೀದಿ ದೀಪಗಳ ಕೊರತೆ ಹೆಚ್ಚಾಗಿದೆ. ಪುರಸಭೆ ಇತ್ತ ಗಮನಹರಿಸಬೇಕು’ ನಿವಾಸಿ ಲಕ್ಷ್ಮಿ ಕುಂಬಾರ ಹೇಳಿದರು. ‘ಈಗಾಗಲೇ ಚರಂಡಿ ಸ್ವಚ್ಛಗೊಳಿಸಲು ಸಿಬ್ಬಂದಿಗೆ ಸೂಚಿಸಲಾಗಿದೆ. ಮೂಲ ಸೌಲಭ್ಯಗಳು ಹಾಗೂ ಚರಂಡಿಗಳ ನಿರ್ಮಾಣದ ಬಗ್ಗೆ ಕ್ರಮಕ್ಕೆ ಕೈಗೊಳ್ಳಲಾಗುವುದು’ ಎಂದು ಪುರಸಭೆ ಅಧಿಕಾರಿ ಜೆ.ಇ. ನದಾಫ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.