ಕೆರೂರ: `ಗ್ರಾಮೀಣ ಸೊಗಡಿನ ದೇಶಿ ಕ್ರೀಡೆಗಳ ಬಗ್ಗೆ ಯುವ ಜನತೆ ಹೆಚ್ಚು ಆಸಕ್ತಿ ಹೊಂದಬೇಕು. ಇವು ನಮ್ಮ ಸನಾತನ ಸಂಸ್ಕೃತಿಯ ಪಳೆಯುಳಿಕೆ ಆಗಿದ್ದು ಅವನ್ನು ಉಳಿಸಿ, ಬೆಳೆಸಲು ಮುಂದಾಗಬೇಕು~ ಎಂದು ಬಾದಾಮಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪುರ ಹೇಳಿದರು.
ಇಲ್ಲಿಗೆ ಸಮೀಪದ ಹಾಲಿಗೇರಿ ಗ್ರಾಮದಲ್ಲಿ ಹಾಲು ಮತ ಸಮಾಜದ ಆರಾಧ್ಯದೈವ ಅಂಬಲಿ ಮುತ್ತೇಶ್ವರ ಜಾತ್ರೆ ಯ ಅಂಗವಾಗಿ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಟಗರಿನ ಕಾಳಗ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೈನಕಟ್ಟಿ ನಿಂಗಪ್ಪಜ್ಜ ಸ್ವಾಮೀಜಿ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ವೇದಿಕೆಯಲ್ಲಿ ಯುವ ಉದ್ಯಮಿ ಮಹಾಂತೇಶ ಕತ್ತಿ, ಕುಮಾರಗೌಡ ಜನಾಲಿ, ಹೊಳೆಯಪ್ಪ ಮರಿಬಾಶೆಟ್ಟಿ, ಸೋಮಪ್ಪ ಪಟಾತ,ಅರ್ಚಕ ಕುಮಾರ ಒಡೆಯರ, ಮಾಳಪ್ಪ ಮುದಕವಿ ಸೇರಿದಂತೆ ಅನೇಕ ಧುರೀಣರು ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ಸುಮಾರು 25 ಸಹಸ್ರಕ್ಕೂ ಹೆಚ್ಚಿನ ಮೊತ್ತದ ಬಹುಮಾನವನ್ನು ವಿಜೇತ ಟಗರುಗಳ ಮಾಲೀಕರಿಗೆ ಬಹುಮಾನ ವಿತರಿಸಲಾಯಿತು.
ಸಾಕಷ್ಟು ತುರುಸು ಕಂಡು ಬಂದ ಈ ಟಗರಿನ ಕಾಳಗ ಸ್ಪರ್ಧೆಯಲ್ಲಿ ಅಕ್ಕಪಕ್ಕದ ಜಿಲ್ಲೆಗಳಿಂದ ಸುಮಾರು 40ಕ್ಕೂ ಹೆಚ್ಚು ಟಗರುಗಳು ಪಾಲ್ಗೊಂಡಿದ್ದವು.
ಸ್ಥಳೀಯ ಕ್ರೀಡಾ ಪ್ರೇಮಿಗಳು ಕಾಳಗದ ಸಮಯದಲ್ಲಿ ಸಿಳ್ಳೆ ಹಾಗೂ ಕೇಕೆ ಹಾಕುತ್ತ ಸ್ಪರ್ಧೆಗೆ ಉತ್ತೇಜನ ತೋರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.