ಭಟ್ಕಳ: `ನೀರು ಕೇಳಿದರೆ ಹಾಲು, ಮಜ್ಜಿಗೆ ನೀಡುವ ಸುಸಂಸ್ಕೃತ ದೇಶ ನಮ್ಮದು, ಇಂಥಹ ದೇಶದಲ್ಲಿ ಉಂಟಾಗಿರುವ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಲು ಪ್ರತಿಯೊಬ್ಬರಲ್ಲೂ ಬದಲಾವಣೆ ಆಗಬೇಕಿದೆ~ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರಿಯ ಸಂಪರ್ಕ ಪ್ರಮುಖ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ಮೈದಾನದಲ್ಲಿ ಭಾನುವಾರ ಸಂಜೆ ಕಾರವಾರ ಜಿಲ್ಲಾ ಆರ್.ಎಸ್.ಎಸ್ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪದಲ್ಲಿ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.
ನಮ್ಮ ದೇಶವನ್ನಾಳಿದ ಬ್ರಿಟಿಷರಲ್ಲಾಗಲಿ, ಮುಸಲ್ಮಾನರಲ್ಲಾಗಲಿ ಸಮಸ್ಯೆಯಿರಲಿಲ್ಲ. ಆದರೆ ಸಮಸ್ಯೆ ನಮ್ಮ ಹಿಂದೂಗಳಲ್ಲೇ ಇತ್ತು.ಅದನ್ನು ಇಟ್ಟುಕೊಂಡೇ, ನಮ್ಮಲ್ಲಿ ಒಡಕನ್ನುಂಟು ಮಾಡಿ ದೇಶವಾಳಿದರು ಎಂದರು.
ಬೇರೆ ಬೇರೆ ದೇಶದವರು ಅವರ ದೇಶವನ್ನು ಪ್ರೀತಿಸಿದರೆ, ನಮ್ಮ ಹಿಂದೂ ರಾಷ್ಟ್ರದಲ್ಲಿ ಮರ, ಗಿಡ, ಭೂಮಿ, ಮಣ್ಣನ್ನು ಪ್ರೀತಿಸುತ್ತಾರೆ. ಅದರಲ್ಲಿ ಭಾವನಾತ್ಮಕ ಸಂಬಂಧವಿದೆ. ಆ ಭಾವನೆಗಳಿಗೆ ಧಕ್ಕೆಯಾದಲ್ಲಿ ಪ್ರತಿಯೊಬ್ಬ ಹಿಂದೂವು ಸಿಡಿದೇಳುತ್ತಾನೆ. ಅಂಥ ನೈತಿಕತೆಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೀಡುತ್ತಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಮತಾಂತರ ದೊಡ್ಡ ಪಿಡುಗಾಗಿದೆ ಎಂದು ಹೇಳಿದ ಅವರು, ಕುಟುಂಬ ನಿಯಂತ್ರಣ ಪದ್ಧತಿ ಕೇವಲ ಹಿಂದೂಗಳಿಗೆ ಮಾತ್ರ ಅನ್ವಯವಾಗುವಂತೆ ಜಾರಿ ತಂದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ದೇಶದ ಅತಿ ದೊಡ್ಡ ಮನೆತನ ಕಪೂರ್ ಕುಟುಂಬದ ಹೆಣ್ಣುಮಗಳೊಬ್ಬಳು ಒಬ್ಬ ಮುಸಲ್ಮಾನನ್ನು ಮದುವೆಯಾಗುತ್ತಿರುವುದರ ಹಿಂದೆಯೂ ಮತಾಂತರದ ಕೈವಾಡ ಇದೆ ಎಂದು ಮಾರ್ಮಿಕವಾಗಿ ನುಡಿದರು.
ಜ್ಞಾನೇಶ್ವರಿ ಬಿಇಡಿ ಕಾಲೇಜಿನ ಪ್ರಾಚಾರ್ಯ ಡಾ.ಆರ್.ನರಸಿಂಹಮೂರ್ತಿ, ಆರ್.ಎಸ್.ಎಸ್ ಕಾರ್ಯಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಮುಖರಾದ ಹನುಮಂತ ಶಾನುಭಾಗ್ ಉಪಸ್ಥಿತರಿದ್ದರು. ಶಿಕ್ಷಕ ಗಣಪತಿ ಶಿರೂರ ಸ್ವಾಗತಿಸಿದರು. ಇದಕ್ಕೂ ಮೊದಲು ಆರ್.ಎಸ್.ಎಸ್. ಗಣವೇಷಧಾರಿಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಆಕರ್ಷಕ ಪಥಸಂಚಲನ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.