ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ವಿವಿಧ ದರ್ಜೆಯ ನಂದಿನಿ ಹಾಲು ಮತ್ತು ಮೊಸರಿನ ದರದಲ್ಲಿ ಪ್ರತಿ ಲೀಟರ್ಗೆ ಎರಡು ರೂಪಾಯಿಯಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ. ಇದೇ 11ರಿಂದ ಪರಿಷ್ಕೃತ ದರ ಜಾರಿಗೆ ಬರುವ ಸಂಭವವಿದೆ.
ಸೋಮವಾರ ನಡೆದ ಕೆಎಂಎಫ್ಆಡಳಿತ ಮಂಡಳಿಯ ಸಭೆಯಲ್ಲಿ, ಗಣೇಶ ಚತುರ್ಥಿ (ಸೆಪ್ಟೆಂಬರ್ 9) ಬಳಿಕ ದರ ಏರಿಸಲು ನಿರ್ಣಯಿಸಲಾಯಿತು ಎಂದು ಗೊತ್ತಾಗಿದೆ. ಹಾಲಿನ ದರ ಲೀಟರ್ಗೆ ಮೂರು ರೂಪಾಯಿಯಷ್ಟು ಹೆಚ್ಚಳ ಮಾಡಲು ಕೆಎಂಎಫ್ ಕೆಲ ದಿನಗಳ ಹಿಂದೆ ಸರ್ಕಾರ ಅನುಮತಿ ಕೋರಿತ್ತು. ಆದರೆ, ದರ ಏರಿಕೆ ವಿಷಯ ಕೆಎಂಎಫ್ಗೇ ಬಿಟ್ಟದ್ದು ಎನ್ನುವ ಮೂಲಕ ಸರ್ಕಾರ ಕೈತೊಳೆದುಕೊಂಡಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿದ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಸ್. ಪ್ರೇಮನಾಥ್, `ಮಂಡಳಿ ಅಧ್ಯಕ್ಷ ಜಿ.ಸೋಮಶೇಖರ ರೆಡ್ಡಿ ಅವರು ಸೋಮವಾರದ ಸಭೆಗೆ ಹಾಜರಾಗಿರಲಿಲ್ಲ. ಆದ್ದರಿಂದ ದರ ಏರಿಕೆ ಕುರಿತು ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ' ಎಂದರು.
ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ಗೆ ಸರ್ಕಾರ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಎರಡು ರೂಪಾಯಿಯಿಂದ ನಾಲ್ಕು ರೂಪಾಯಿಗೆ ಹೆಚ್ಚಳ ಮಾಡಿರುವುದರಿಂದ ಹಾಲಿನ ಉತ್ಪಾದನೆಯಲ್ಲಿ ಭಾರಿ ಹೆಚ್ಚಳವಾಗಿದೆ. ಇದರಿಂದಾಗಿ ಕೆಲ ತಿಂಗಳುಗಳಿಂದ ಕೆಎಂಎಫ್ನ ನಷ್ಟವೂ ಏರಿದೆ. ದರ ಹೆಚ್ಚಳದಿಂದ ಬರುವ ಆದಾಯವನ್ನು ಹಾಲಿನ ಪುಡಿ ತಯಾರಿಕಾ ಘಟಕ ಮತ್ತಿತರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗೆ ವಿನಿಯೋಗಿಸಲು ಕೆಎಂಎಫ್ ಯೋಚಿಸಿದೆ.