ಕೊಪ್ಪ: ಜಿಲ್ಲೆಯಲ್ಲಿ ಶೀಘ್ರದಲ್ಲೇ ಹಾಲು ಉತ್ಪಾದಕರ ಒಕ್ಕೂಟ ಆರಂಭಗೊಳ್ಳುವ ವಿಶ್ವಾಸವನ್ನು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಡಿ.ಎನ್.ಜೀವರಾಜ್ ವ್ಯಕ್ತಪಡಿಸಿದರು.
ತಾಲ್ಲೂಕಿನ ಸಿಗದಾಳು ಅಣ್ಣಪ್ಪ ಪೈ ಸಭಾಭವನದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಸೋಮವಾರ ಏರ್ಪಡಿಸಿದ್ದ 21ನೇ ಬೃಹತ್ ಯೋಗ ಆರೋಗ್ಯ ಶಿಬಿರದ ಸಮರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮೀಕ್ಷೆ ನಡೆಸಿ ಜಿಲ್ಲೆಯಲ್ಲಿ ದಿನವಹಿ 2.50 ಲಕ್ಷ ಲೀಟರ್ ಹಾಲೂ ಉತ್ಪಾದನೆಯಾಗುತ್ತಿರುವ ಬಗ್ಗೆ ಮಾಹಿತಿ ಒದಗಿಸಿದೆ. ಆದರೆ ಡೇರಿ ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದರು.
ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಎಸ್.ಎನ್. ರಾಮ ಸ್ವಾಮಿ ಮಾತನಾಡಿ, ಮನುಷ್ಯನ ಮಾನಸಿಕ ಸ್ಥಿಮಿತ, ಶಾಂತಿ , ನೆಮ್ಮದಿಗೆ ಯೋಗ ಸಹಕಾರಿ ಎಂದರು. ಯೋಗ ಶಿಕ್ಷಣ ಯೋಜನೆ ನಿರ್ದೇಶಕ ಶಶಿಕಾಂತ್ ಜೈನ್ ಮತನಾಡಿ, ಯೋಗ ತರಬೇತಿ ನೀಡಲು ಯೋಜನೆ 4700 ಶಿಕ್ಷಕರನ್ನು ನಿಯೋಜಿಸಿದೆ. ವಾರ್ಷಿಕ 4ಲಕ್ಷ ಜನರಿಗೆ ಯೊಗ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಅರವಿಂದ ಸೋಮಯಾಜಿ, ಕಾಫಿ ಬೆಳೆಗಾರ ಕೌರಿ ಪ್ರಕಾಶ್, ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ, ಯೋಜನಾಧಿಕಾರಿ ಸುಖೇಶ್ ಮೊದಲಾದವರಿದ್ದರು.