ಸರ್ಕಾರದ ಭರವಸೆಗಳಿಗೆ ಕೊರತೆ ಇಲ್ಲ. ಸರ್ಕಾರಕ್ಕೆ ಹಣದ ಕೊರತೆಯೂ ಇಲ್ಲ. ‘ಹಾವು ಹೊಡೆದು ಹದ್ದಿಗೆ ಹಾಕುವ’ ಕೆಲಸಗಳಿಗೆ ಕೊರತೆ ಎಲ್ಲಿದೆ ಹೇಳಿ?
ಗ್ರಾಮೀಣ ಭಾಗದಲ್ಲಿ ಆರು ಲಕ್ಷ ಶೌಚಾಲಯಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಿರುವುದಾಗಿ ಸುದ್ದಿ ಪ್ರಕಟವಾಗಿದೆ. ಅಲ್ಲಿ ಕುಡಿಯುವ ನೀರಿನ ಅಭಾವ ಇದೆ. ಗದಗ ಜಿಲ್ಲೆ ಹುಲಕೋಟಿಯ ಕೆ.ಎಚ್. ಪಾಟೀಲ ಗ್ರಾಮೀಣ ಪ್ರತಿಷ್ಠಾನ ಸ್ಥಾಪಿಸಿರುವ ಶುದ್ಧ ನೀರಿನ ಘಟಕಗಳನ್ನು ಗ್ರಾಮೀಣ ಭಾಗದ ಎಲ್ಲ ಕಡೆ ಸರ್ಕಾರ ಸ್ಥಾಪಿಸುವ ಕೆಲಸ ಮೊದಲು ಮಾಡಲಿ.
‘ಮನೆಗೊಂದು ಶೌಚಾಲಯ’ ಯೋಜನೆ ಈಗಾಗಲೇ ಜಾರಿಯಲ್ಲಿದೆ. ಬಯಲು ಶೌಚ ಮಾಡಿದವರಿಗೆ ದಂಡ ಹಾಕುವುದಾಗಿ ಫಲಕ ನಿಲ್ಲಿಸಿರುವ ಗ್ರಾಮ ಪಂಚಾಯ್ತಿಗಳೂ ಇವೆ.
ಗ್ರಾಮೀಣರನ್ನು ತಮ್ಮ ಪಾಡಿಗೆ ಬದುಕಲು ಬಿಡಿ. ಅಗತ್ಯ ವಸ್ತುಗಳ ಬೆಲೆ ಮೊದಲು ತಗ್ಗಿಸಿ. ಹಾವುಹೊಡೆದು ಹದ್ದಿಗೆ ಹಾಕುವ ಅಪ್ರಯೋಜಕ ಯೋಜನೆಗಳನ್ನು ಕೈಬಿಡಿ.
–ರಾಜಶೇಖರ ಹಾದಿಮನಿ,ಧಾರವಾಡ