ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಜಿಲ್ಲಾ ಕೇಂದ್ರವೋ, ಕೊಳಚೆ ಪ್ರದೇಶವೋ...!

Last Updated 28 ಮೇ 2012, 10:15 IST
ಅಕ್ಷರ ಗಾತ್ರ

ಹಾವೇರಿ: ಸ್ವಚ್ಛತೆಗೂ ಹಾವೇರಿಗೂ ಯಾವುದೇ ರೀತಿಯ ಸಂಬಂಧವೇ ಇಲ್ಲದಾಗಿದೆ. ನಗರದಲ್ಲಿ ಒಂದು ಸುತ್ತು ಹಾಕಿ ಬಂದರೆ, ಇದೇನು ಜಿಲ್ಲಾ ಕೇಂದ್ರವೋ ಅಥವಾ ಕೊಳಚೆ ಪ್ರದೇಶವೋ ಎಂಬ ಅನುಮಾನ ಕಾಡದೇ ಇರದು.

ಎಲ್ಲಿ ನೋಡಿದರಲ್ಲಿ ಕಸದ ರಾಸಿ ಕಣ್ಣಿಗೆ ರಾಚುವ, ಗಟಾರುಗಳು ತುಂಬಿ ಕೊಳಚೆ ರಸ್ತೆ ಮೇಲೆ ಹರಿಯುತ್ತಿರುವ ದೃಶ್ಯ ಸಾಮಾನ್ಯ ಎನ್ನುವಂತಾಗಿದೆ.

`ನಗರದ ಸ್ವಚ್ಛತೆ ಕಾಪಾಡಿ~, `ಸ್ವಚ್ಛ ನಗರ, ಸುಂದರ ನಗರ~, `ಸ್ವಚ್ಛತೆಯೇ ಆರೋಗ್ಯಕ್ಕೆ ದಾರಿ~ ಎಂಬೆಲ್ಲ ಬಿತ್ತಿ ಪತ್ರಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ನಗರಸಭೆ, ಇದನ್ನು ಹೇಳುವುದಷ್ಟೇ ನಮ್ಮ ಕೆಲಸ. ಆದರೆ, ಅದು ನಮಗೆ ಅನ್ವಯಿ ಸುವುದಿಲ್ಲ ಎನ್ನುವಂತೆ ನಗರದಲ್ಲೆಡೆ ಕಸದ ಗುಡ್ಡೆಗಳು ನಿರ್ಮಾಣವಾದರೂ, ಗಟಾ ರುಗಳು ತುಂಬಿ ದುರ್ನಾತ ಬೀರಿದರೂ ಅದನ್ನು ಸ್ವಚ್ಛಗೊಳಿಸುವ ಗೋಜಿಗೆ ಹೋಗುತ್ತಿಲ್ಲ.

ನಗರದ ಯಾವುದೇ ವಾರ್ಡ್‌ಗೆ ಭೇಟಿ ನೀಡಿದರೂ ಅಲ್ಲಿ ನಿರ್ಮಲದ ಕೊರತೆ ಎದ್ದು ಕಾಣುತ್ತದೆ. ಕಾಲುವೆಗಳು ತುಂಬಿ ರಸ್ತೆ ಮೇಲೆ ಕೊಳಚೆ ಹರಿಯುತ್ತಿರು ತ್ತದೆ. ಕಸದ ರಾಸಿಯಲ್ಲಿ ಹಾಗೂ ಕೊಳಚೆ ನೀರಿನಲ್ಲಿ ಹಂದಿಗಳ ಹೊರಳಾಟ ಅಸಹನೀಯವಾಗಿದೆ.

ನಗರದಲ್ಲಿ ಇದೆಲ್ಲ ಮಾಮೂಲು ಎನ್ನುವಂತೆ ಇಲ್ಲಿನ ಜನರು ಮೂಗು ಕಣ್ಣು ಮುಚ್ಚಿ ಸಾಗಿದರೆ, ನಗರದ ಜನ ಪ್ರತಿನಿಧಿಗಳು ಕಣ್ಣು ಮೂಗು ಇಲ್ಲದವ ರಂತೆ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಹಾವೇರಿ ಅಕ್ಷರಶಃ ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ.

ತರಕಾರಿ ಮಾರುಕಟ್ಟೆ ಪ್ರದೇಶ, ಯಾಲಕ್ಕಿ ಓಣಿ, ಎಂ.ಜಿ. ರಸ್ತೆ, ಜಯನಗರ, ರೇಲ್ವೇ ನಿಲ್ದಾಣ ರಸ್ತೆಗಳಲ್ಲಿ ಸ್ವಚ್ಛತೆಯಿಂದ ಮಾರು ದೂರವಿದ್ದು, ಕಸ, ಕೊಳಚೆ ರೌದ್ರನರ್ತನಕ್ಕೆ ಜನರೇ ಕಣ್ಣು ಮೂಗು ಮುಚ್ಚಿಕೊಳ್ಳಬೇಕಾಗುತ್ತದೆ. ಇದನ್ನು ನೋಡಿದರೆ ಇಲ್ಲಿ ನಗರಸಭೆ ಇದೆಯೋ, ಇಲ್ಲವೋ,ಎನ್ನುವ ಅನುಮಾನ ಕಾಡುತ್ತದೆ.

ನಗರದ ಬಹುತೇಕ ಪ್ರದೇಶಗಳಲ್ಲಿ ರಸ್ತೆ ಬದಿ ಗೂಡಂಗಡಿಗಳ ವ್ಯಾಪಾರ ಸಾಮಾನ್ಯವಾಗಿದೆ. ಅವುಗಳಲ್ಲಿ ಸಿದ್ಧ ಆಹಾರಗಳನ್ನು ಮಾರಾಟ ಮಾಡಲಾಗುತ್ತಿದೆಯಲ್ಲದೇ ಕೆಲವಡೆ ಅಲ್ಲಿಯೇ ತಯಾರಿಸಿ ನೀಡಲಾಗುವ ಎಗ್ ರೈಸ್, ಮಿರ್ಚಿ ಬಜಿ, ಗೋಬಿ ಮಂಚೂರಿ, ಸೇರಿದಂತೆ ಇತರ ಆಹಾ ರಗಳ ಮಾರಾಟ ಭರ್ಜರಿಯಾಗಿದೆ.

ಆದರೆ, ಗೂಡಂಗಡಿಗಳು ಕೊಳಚೆ ಪ್ರದೇಶದಲ್ಲಿ ಹೆಚ್ಚಾ ಗಿರುವುದರಿಂದ ಕೊಳಚೆ ಮಧ್ಯದಲ್ಲಿಯೇ ಜನರು ಇಂತಹ ಆಹಾರ ತುಂಬಿರುವ ರಸ್ತೆಯಲಿಯ್ಲೌ ಜನರೂ ತಿನ್ನುತ್ತಾರೆ. ಇದರಿಂದ ಜನರ ಆರೋಗ್ಯದ ಮೇಲೆ ಸಹಜವಾಗಿ ದುಷ್ಪರಿಣಾಮ ಬೀರುತ್ತಲಿದೆ. 

ಸೊಳ್ಳೆಗಳ ತಾಣ: ಎಲ್ಲೆಂದರಲ್ಲಿ ಕಸ ಹಾಗೂ ಕೊಳಚೆ ಇರುವುದರಿಂದ ಇಡೀ ನಗರವೇ ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ಅಭಿವೃದ್ಧಿ ಹೊಂದಿದ ಬಡಾವಣೆ ಎಂದು ಹೆಸರು ಪಡೆದಿರುವ ಬಸವೇಶ್ವರ ನಗರ, ವಿದ್ಯಾನಗರ, ಅಶ್ವಿನಿ ನಗರಗಳು ಸೊಳ್ಳೆಗಳ ಕಾಟಕ್ಕೆ ಹೊರತಾಗಿಲ್ಲ.
 
ಗಟಾರುಗಳನ್ನು ಕಾಲಕಾಲಕ್ಕೆ ಸ್ವಚ್ಛ ಗೊಳಿಸದೇ ಇರುವುದರಿಂದ ಹಾಗೂ ಕಸದ ತೊಟ್ಟಿಗಳಲ್ಲಿನ ಕಸವನ್ನು ಸಕಾಲಕ್ಕೆ ವಿಲೇವಾರಿ ಮಾಡದಿರುವು ದರಿಂದ ಕೊಳಚೆ ಹಾಗೂ ಕಸದಲ್ಲಿ ಹಂದಿಗಳ ದೊಡ್ಡ ಸಾಮ್ರಾಜ್ಯವೇ ಅಲ್ಲಿರುತ್ತದೆ. ಹಂದಿಗಳು ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರ ಆರೋಗ್ಯಕ್ಕೆ ಮಾರಕವಾಗಿವೆ,.

ಲಕ್ಷಾಂತರ ರೂ. ಖರ್ಚು: ನಗರಸಭೆ ನಗರದ ಸ್ವಚ್ಛತೆಗಾಗಿ ಪ್ರತಿ ತಿಂಗಳು ಅಂದಾಜು ಏಳು ಲಕ್ಷ ರೂ.ಗಳನ್ನು ಖರ್ಚು ಮಾಡುತ್ತಿದೆ. ಆದರೆ ನೈರ್ಮಲ್ಯ ಮಾತ್ರ ಮರೀಚಿಕೆಯಾಗಿದೆ. ನಗರಸಭೆ 4.50 ಲಕ್ಷ ರೂ.ಗಳನ್ನು ನೀಡಿ ಪ್ರತಿ ತಿಂಗಳು ಖಾಸಗಿಯವರಿಂದ 65 ಪೌರ ಕಾರ್ಮಿಕರನ್ನು, 1 ಟ್ರ್ಯಾಕ್ಟರ್ ಸೇವೆ ಪಡೆಯುತ್ತಿದೆ. ಇದರ ಜತೆಗೆ ನಗರ ಸಭೆಯ 25 ಪೌರಕಾರ್ಮಿಕರು ಮತ್ತು 2 ಟ್ರ್ಯಾಕ್ಟರ್, 2 ಕಂಟೇನರ್, ಚಾಲಕರು, ಮೂವರು ಅಧಿಕಾರಿಗಳು ಈ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊ ಳ್ಳುತ್ತಾರೆ.

ಇದಕ್ಕಾಗಿ ನಗರಸಭೆ ಪ್ರತಿ ತಿಂಗಳು ಏಳು ಲಕ್ಷ ರೂ.ಗಳಿಗೂ ಅಧಿಕ ಖರ್ಚಾಗುತ್ತದೆ. ಆದರೆ, ಈ ಪೌರ ಕಾರ್ಮಿಕರು ಎಲ್ಲಿ ಕೆಲಸ ಮಾಡುತ್ತಾರೆ ಎಂಬುದೇ ತಿಳಿಯು ತ್ತಿಲ್ಲ. ಇಷ್ಟೊಂದು ಜನ ಕೆಲಸ ಮಾಡಿ ದರೆ, ನಗರದಲ್ಲಿ ಕಸದ ರಾಸಿಗಳು, ತುಂಬಿದ ಗಟಾರುಗಳು ಉಳಿದು ಕೊಳ್ಳುವುದೇಕೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಹುಟ್ಟಿಕೊಳ್ಳುತ್ತದೆ.

ಸಾರ್ವಜನಿಕರು ಸ್ವಚ್ಛತೆಗೆ ಗಮನ ನೀಡುತ್ತಿಲ್ಲ. ಎಲ್ಲೆಂದರಲ್ಲಿ ಕಸವನ್ನು ಎಸೆದು ನಗರ ಸೌಂದರ್ಯಕ್ಕೆ ಧಕ್ಕೆ ತರುತ್ತಿದ್ದಾರೆ. ಜನರಲ್ಲಿ ಜಾಗೃತಿ ಮೂಡಿ ಸುವ ಕೆಲಸ ಮಾಡಲಾಗುತ್ತದೆಯಲ್ಲದೇ, ನಗರಸಭೆ ಸಿಬ್ಬಂದಿ ಮನೆ ಮನೆಗೆ ಹೋಗಿ ಕಸವನ್ನು ಸಂಗ್ರಹಿಸುತ್ತಾರೆ ಎಂದು ಹೇಳುತ್ತಾರೆ ನಗರಸಭೆ ಅಧ್ಯಕ್ಷ ಜಗದೀಶ ಮಲಗೋಡ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT