ಹಾಸನ: ಮಂಗಳೂರಿನಲ್ಲಿ ಶನಿವಾರ (ಜ.28) ನಡೆಯಲಿರುವ ಬಿಜಿಎಸ್ ವಿದ್ಯಾರ್ಥಿ ನಿಲಯದ ಉದ್ಘಾಟನೆ, ಬಿಜಿಎಸ್ ಪದವಿ ಪೂರ್ವ ಕಾಲೇಜು ಶಂಕುಸ್ಥಾಪನೆ ಹಾಗೂ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ 68ನೇ ವರ್ಧಂತ್ಯುತ್ಸವದ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದಿಂದ ಹೊರಟ ಕಾಲಭೈರವೇಶ್ವರ ಧರ್ಮಜ್ಯೋತಿ ಯಾತ್ರೆ ಗುರುವಾರ ಇಲ್ಲಿಗೆ ಆಗಮಿಸಿದಾಗ ಭವ್ಯ ಸ್ವಾಗತ ಕೋರಲಾಯಿತು.
ಮಧ್ಯಾಹ್ನ 1 ಗಂಟೆ ಸುಮಾರಿಗೆ ಇಲ್ಲಿನ ಡೇರಿ ವೃತ್ತಕ್ಕೆ ಬಂದ ಧರ್ಮಜ್ಯೋತಿ ಯಾತ್ರೆಯನ್ನು ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಹಾಗೂ ಇತರ ಗಣ್ಯರು ಸ್ವಾಗತಿಸಿದರು. ಅಲ್ಲಿಂದ ಶಂಕರಮಠ ರಸ್ತೆಯವರೆಗೆ ವಾಹನದಲ್ಲೇ ಜ್ಯೋತಿಯನ್ನು ತರಲಾಯಿತು. ವಿವಿಧ ಶಾಲೆಗಳ ಮಕ್ಕಳು, ಗಣ್ಯರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಧರ್ಮಜ್ಯೋತಿಯನ್ನು ಬರಮಾಡಿಕೊಂಡರು.
ರಥ ಶಂಕರಮಠದ ಮುಂದೆ ಬರುತ್ತಿದ್ದಂತೆ ಹೋಲಿ ಮದರ್ ಶಾಲೆಯ ಮಕ್ಕಳು ಹಾಗೂ ಇತರರು ಬರಮಾಡಿಕೊಂಡರು. ಶಂಕರಮಠದ ಅರ್ಚಕರು ರಥಕ್ಕೆ ಪೂಜೆ ಸಲ್ಲಿಸಿದರು. ಅಲ್ಲಿಂದ ಮತ್ತೆ ಮೆರವಣಿಗೆ ಮೂಲಕ ಆದಿಚುಂಚನಗಿರಿ ಶಾಖಾ ಮಠದವರೆಗೆ ಬರಮಾಡಿಕೊಳ್ಳಲಾಯಿತು. ಮೆರವಣಿಗೆ ಜತೆಗೆ ಬಂದಿದ್ದವರು ಇಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಮತ್ತೆ ಮಂಗಳೂರಿನತ್ತ ಯಾತ್ರೆ ಮುಂದುವರಿಸಿದರು.