ಹಾಸನ: ನಗರದ ಚನ್ನಪಟ್ಟಣ ಬೈಪಾಸ್ ಬಳಿ ಸೋಮವಾರ ನಸುಕಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಾಗೂ ಕಾರು ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರು ಬೆಂಗಳೂರಿನ ಜೆ.ಸಿ. ನಗರದ ಮುಬಾರಕ್ ಮೊಹಲ್ಲಾದವರು. ಕಾರಿನಲ್ಲಿದ್ದ ವಾಜಿದಾ (40), ಸಮೀವುಲ್ಲಾ ಖಾನ್ (55) ಹಾಗೂ ಐದು ವರ್ಷದ ಬಾಲಕ ಫಯಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಯಾಜ್ ಅಹಮ್ಮದ್, ಅವರ ಪುತ್ರಿ ಫೌಜಿಯಾ ಹಾಗೂ ಸಂಬಂಧಿ ರೂಮಾನ್ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ.
ಮಂಗಳೂರು ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ಟಾಟಾ ಇಂಡಿಕಾ ಕಾರಿಗೆ ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿಗೆ ಸೇರಿದ ವೊಲ್ವೋ ಬಸ್ ಡಿಕ್ಕಿ ಹೊಡೆದಾಗ ಈ ಅವಘಡ ಸಂಭವಿಸಿದೆ. ನಸುಕಿನ 2.30 ರಿಂದ 3ಗಂಟೆಯೊಳಗಿನ ಅವಧಿಯಲ್ಲಿ ಈ ಅಪಘಾತ ನಡೆದಿದ್ದು, ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಹಾಸನ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.