ಹಾಸನ: ಹಾಸನ ಪಶುವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಕೆಲವು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆ ಶುಕ್ರವಾರ ಅಂತ್ಯ ಕಂಡಿತು.
ಪ್ರತಿಭಟನಾ ಸ್ಥಳಕ್ಕೆ ಬಂದ ಪಶುವೈದ್ಯಕೀಯ ಕಾಲೇಜಿನ ಕುಲಪತಿ ಡಾ.ರೇಣುಕಾಪ್ರಸಾದ್, ಕುಲಸಚಿವ ಜಯಪ್ರಕಾಶ್ ಹಾಗೂ ಕರ್ನಾಟಕ ಪಶುವೈದ್ಯಕೀಯ ಸಮಿತಿಯ ಅಧ್ಯಕ್ಷ ಡಾ.ಚಂದ್ರಶೇಖರಮೂರ್ತಿ ವಿದ್ಯಾರ್ಥಿಗಳ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವುದಾಗಿ ಭರವಸೆ ಕೊಟ್ಟ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ನಿಲ್ಲಿಸಿದರು.
ಮುಖ್ಯವಾಗಿ ಕಾಲೇಜಿಗೆ ಮಾನ್ಯತೆ ನೀಡಬೇಕೆಂಬುದು ವಿದ್ಯಾರ್ಥಿಗಳ ಬೇಡಿಕೆಯಾಗಿತ್ತು. ಮಾನ್ಯತೆ ನೀಡಬೇಕಾದರೆ ಕಾಲೇಜಿಗೆ ಕೆಲವೊಂದು ಮೂಲಸೌಕರ್ಯ ಒದಗಿಸಬೇಕಾಗುತ್ತದೆ. ಅದಕ್ಕಾಗಿ ಶೀಘ್ರದಲ್ಲೇ ಹಂತ ಹಂತವಾಗಿ ಮೂಲಸೌಕರ್ಯ ಒದಗಿಸಿ, ಮಾನ್ಯತೆ ಸಿಗುವಂತೆ ಮಾಡಲು ಶ್ರಮಿಸುವುದಾಗಿ ಕುಲಪತಿ ಭರವಸೆ ನೀಡಿದರು.