ಬೆಂಗಳೂರು: ಕೃಷಿ ಇಲಾಖೆಯು ರೈತರಿಗಾಗಿ ಹವಾಮಾನ ಆಧಾರಿತ ರಾಷ್ಟ್ರೀಯ ಬೆಳೆ ವಿಮಾ ಯೋಜನೆಯನ್ನು ೨೦೧೩--–೧೪ರ ಹಿಂಗಾರು ಹಂಗಾಮಿಗೆ ಅನ್ವಯವಾಗುವಂತೆ ಜಾರಿಗೊಳಿಸಿದೆ.
ಈ ಯೋಜನೆ ಜೋಳ, ಗೋಧಿ, ಕಡಲೆ, ಆಲೂಗಡ್ಡೆ, ದ್ರಾಕ್ಷಿ ಮತ್ತು ಮಾವು ಬೆಳೆಗಳಿಗೆ ಅನ್ವಯವಾಗಲಿದೆ.
ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೀದರ್, ವಿಜಾಪುರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಧಾರವಾಡ, ಹಾವೇರಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ ಮತ್ತು ಯಾದಗಿರಿ ಜಿಲ್ಲೆಗಳ ಆಯ್ದ ೨೪೩ ಕ್ಷೇತ್ರ ಘಟಕಗಳ ವ್ಯಾಪ್ತಿಯಲ್ಲಿ ಬೆಳೆದ ಬೆಳೆಗಳಿಗೆ ವಿಮೆ ಸೌಲಭ್ಯ ಲಭ್ಯವಾಗಲಿದೆ.
ವಿಮಾ ಯೋಜನೆಯನ್ನು ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿ., ಐ.ಸಿ.ಐ.ಸಿ.ಐ. ಲೊಂಬಾರ್ಡ್ ಜನರಲ್ ಇನ್ಸೂರೆನ್ಸ್ ಕಂಪನಿ ಲಿ, ಎಚ್.ಡಿ.ಎಫ್.ಸಿ. ಎರ್ಗೊ ಜನರಲ್ ಇನ್ಸೂರೆನ್ಸ್ ಕಂಪನಿ ಲಿ., ಚೋಳಮಂಡಲಮ್ ಎಂ.ಎಸ್. ಜನರಲ್ ಇನ್ಸೂರೆನ್ಸ್ ಕಂಪನಿ ಲಿ., ಮತ್ತು ಇಫ್ಕೋ ಟೋಕಿಯೋ ಜನರಲ್ ಇನ್ಸೂರೆನ್ಸ್ ಕಂಪನಿ ಲಿ., ಕಂಪೆನಿಗಳು ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿವೆ.
ಯೋಜನೆಯು ಬೆಳೆ ಸಾಲ ಪಡೆಯುವ ರೈತರಿಗೆ ಕಡ್ಡಾಯ. ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಹಾಗೂ ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಗಳ ಲಾಭವನ್ನು ಬೆಳೆ ಸಾಲ ಪಡೆಯುವ ರೈತರು ಕಡ್ಡಾಯವಾಗಿ ಪಡೆಯಬೇಕು.
ಬೆಳೆ ಸಾಲ ಪಡೆಯದ ರೈತರು ಯೋಜನೆಯಲ್ಲಿ ಪಾಲ್ಗೊಳ್ಳಲು ಹತ್ತಿರದ ಬ್ಯಾಂಕ್ ಶಾಖೆ ಸಂಪರ್ಕಿಸಿ ಅರ್ಜಿ, ಭೂಮಿ ಹೊಂದಿರುವುದಕ್ಕೆ ದಾಖಲೆ ನೀಡಬೇಕು. ಬ್ಯಾಂಕಿನಲ್ಲಿ ಖಾತೆ ತೆರೆದು ವಿಮಾ ಕಂತು ಕಟ್ಟಬೇಕು. ಯೋಜನೆಗೆ ಸೇರ್ಪಡೆಗೊಳ್ಳಲು ಇದೇ 31 ಕೊನೆ ದಿನ.