ಹಿಂದಿಯನ್ನಷ್ಟೇ ಏಕೆ? ಆಫ್ರಿಕಾ, ಬೋಸ್ನಿಯಾ ಮುಂತಾದ ವಿದೇಶಿ ಭಾಷೆಗಳನ್ನಾದರೂ ನಾವೇಕೆ ದ್ವೇಷಿಸಬೇಕು? ಅದ್ದರಿಂದ ‘ಹಿಂದಿಯನ್ನು ದ್ವೇಷಿಸುವುದು ಬೇಡ’ ಎಂಬ ‘ಉಪದೇಶ’ಕ್ಕೆ (ವಾ. ವಾ. ಜ. 3) ಅರ್ಥವೇನೂ ಇರುವುದಿಲ್ಲ. ‘ಪ್ರತಿಯೊಬ್ಬರೂ ಇಂಗ್ಲಿಷ್ ಕಲಿಯಿರಿ’ ಎಂದು ಕಮರ್ಷಿಯಲ್ ಜಾಹೀರಾತುಗಳೇನೂ ಇರುವುದಿಲ್ಲ. ಆದರೂ ಜನ ಇನ್ನೂ ಗರ್ಭಸ್ಥ ಶಿಶುವಿಗೇ ಪ್ರತಿಷ್ಠಿತ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಬುಕಿಂಗ್ ಬಯಸುತ್ತಾರೆ! ಅಂತಹ ಪ್ರತಿಷ್ಠೆ ಹಿಂದಿಗೂ ಬರಬೇಕೆ? ಬಂದಿದೆಯೇ? ಹಾಗೆಂದು ಕನಸು ಕಾಣಬೇಕೇ?!
ಕನ್ನಡ ನಾಡಿನ ಪ್ರಜೆಗಳು ಜೀವನ ಪರ್ಯಂತ ಇಲ್ಲೇ ಬದುಕು ಕಟ್ಟಿಕೊಂಡಿರಲೆಂದುಯಾರೂ ಬಯಸಿಲ್ಲ; ಬಲವಂತ ಮಾಡಿಲ್ಲ ಹಾಗೂ ಇಲ್ಲಿರುವವರು ‘ಬಾವಿಕಪ್ಪೆ’ಯಂತೆ ಬದುಕಿಲ್ಲ; ಬದುಕಬೇಕಾದ್ದೂ ಇಲ್ಲ. ಆದರೆ ಈ ನೆಲದಲ್ಲಿ ನಲಿಯುವ, ಕಲಿಯುವ, ಆ ಮೂಲಕ ಬೆಳೆಯುವ ಎಲ್ಲ ಮಕ್ಕಳಿಗೆ ವಿದ್ಯೆ ನೀಡಬೇಕಾದ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿರುತ್ತದೆ.
ಹಿಂದಿ, ಗುಜರಾತಿ, ಬಂಗಾಳಿಗಳು ಇಲ್ಲಿಗೆ ಅನ್ಯ ‘ಸಂಸ್ಕೃತಿ’ ಆದ್ದರಿಂದ ಕನ್ನಡ ಸಮಾಜದ ಕಿಂಚಿತ್ ಇತಿಹಾಸ, ಸಂಸ್ಕಾರ, ಪರಂಪರೆಗಳನ್ನು ಇಲ್ಲಿನ ಎಲ್ಲಾ ಮಕ್ಕಳಿಗೂ, ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಧಾರೆಯೆರೆಯುವ ಮೂಲಕ ಆ ಜವಾಬ್ದಾರಿಯನ್ನು ಈಡೇರಿಸಬೇಕಾಗುತ್ತದೆ.