ಕೃಷ್ಣರಾಜಪುರ: `ಹಿಂದುಳಿದ ವರ್ಗದ ಸಮೀಕ್ಷೆಗಾಗಿ ಈಗಾಗಲೇ ಆಯೋಗ ರಚಿಸಲಾಗಿದೆ. ಆಯೋಗದ ವರದಿಯನ್ನು ಜಾರಿಗೊಳಿಸುವುದರ ಮೂಲಕ ಎಲ್ಲ ಜನಾಂಗದ ಅಂಕಿ-ಅಂಶ ಮತ್ತು ಆರ್ಥಿಕ ಸ್ಥಿತಿಗತಿಯ ಬಿಡುಗಡೆಗೆ ಮುಖ್ಯಮಂತ್ರಿ ಅವರಿಗೆ ಒತ್ತಡ ಹೇರಲಾಗುವುದು' ಎಂದು ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಭರವಸೆ ನೀಡಿದರು.
ಸ್ಥಳೀಯ ರಾಜೀವ್ ಗಾಂಧಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ತಿಗಳರ ಸಮಾವೇಶದಲ್ಲಿ ಅವರು ಮಾತನಾಡಿದರು.`ಸಂಘ ಚಟುವಟಿಕೆಗಳಿಗೆ ಮಹದೇವಪುರ ಕ್ಷೇತ್ರ ವ್ಯಾಪ್ತಿಯಲ್ಲಿ ನಿವೇಶನವನ್ನು ಮೀಸಲಿರಿಸಲಾಗುವುದು. ಜನಾಂಗದ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿಗೆ ಕರೆದೊಯ್ದು ಸಮಾಜದ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು' ಎಂದು ಅವರು ತಿಳಿಸಿದರು.
ಶಾಸಕ ಎನ್.ಎಸ್.ನಂದೀಶ ರೆಡ್ಡಿ, `ಸಮುದಾಯ ಕುಲಕಸುಬು ಮುಂದುವರಿಸಲು ಕ್ಷೇತ್ರದಲ್ಲಿ ಸೂಕ್ತ ಮಾರುಕಟ್ಟೆ ಒದಗಿಸಲಾಗುವುದು' ಎಂದು ಭರವಸೆ ನೀಡಿದರು. ಜೆಡಿಎಸ್ ಹಿರಿಯ ಮುಖಂಡ ಪಿ.ಜಿ.ಆರ್. ಸಿಂಧ್ಯಾ, ಮಠಗಳ ಅಭಿವೃದ್ಧಿಗೆ ಹಣಕಾಸಿನ ಕೊರತೆಯಿದ್ದು ಈ ಭಾಗದ ಸಚಿವರು ಮತ್ತು ಶಾಸಕರು ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸಿ ನೆರವು ನೀಡಲು ಸಹಕರಿಸಬೇಕು' ಎಂದು ವಿನಂತಿಸಿದರು.
ಸಂಸದ ಪಿ.ಸಿ.ಮೋಹನ್, ಶಾಸಕ ನೆ.ಲ.ನರೇಂದ್ರಬಾಬು, ವಿಧಾನ ಪರಿಷತ್ ಸದಸ್ಯ ಬೈರತಿ ಎಸ್.ಸುರೇಶ್, ಮಾಜಿ ಸಚಿವ ಎ.ಕೃಷ್ಣಪ್ಪ, ಬಿಬಿಎಂಪಿ ಸದಸ್ಯ ಬೈರತಿ ಎ. ಬಸವರಾಜ್, ಜೆಡಿಎಸ್ ಕ್ಷೇತ್ರ ಘಟಕದ ಅಧ್ಯಕ್ಷ ರವಿ ಪ್ರಕಾಶ್ ಉಪಸ್ಥಿತರಿದ್ದರು.