ಗದಗ: ಬಡವರ ಮತ್ತು ಹಿಂದುಳಿದ ವರ್ಗದ ಶ್ರೇಯೋಭಿವೃದ್ಧಿಗಾಗಿ ಬಜೆಟ್ನಲ್ಲಿ ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಕಳಕಪ್ಪ ಬಂಡಿ ಹೇಳಿದರು.
ನಗರದ ಕನಕ ಭವನದಲ್ಲಿ ಸೋಮವಾರ ಕಾಳಿದಾಸ ಶಿಕ್ಷಣ ಸಮಿತಿ ವತಿಯಿಂದ ಏರ್ಪಡಿಸಿದ್ದ ಡಿ. ದೇವರಾಜ ಅರಸುರವರ 97ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದುಳಿದ ಸಮಾಜಕ್ಕಾಗಿ ಅತೀ ಹೆಚ್ಚು ಹಣವನ್ನು ಬಜೆಟ್ನಲ್ಲಿ ಇಡುವ ಮೂಲಕ ಸರ್ಕಾರ ಹಿಂದುಳಿದ ಜನಾಂಗದ ಬಗ್ಗೆ ಕಾಳಜಿ ತೋರಿಸಿದೆ. ಡಿ. ದೇವರಾಜ ಅರಸು ಅವರು ಹಿಂದುಳಿದವರ ಹಾಗೂ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಬೋರವೆಲ್, ವೈಯಕ್ತಿಕ ಸಾಲ ಯೋಜನೆ ಜಾರಿಗೆ ತಂದರು. ಹಿಂದುಳಿದ ಜನಾಂಗಕ್ಕೆ ಮೀಸಲಾತಿ ಕೊಡುವ ಮೂಲಕ ಅವರನ್ನು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರುವಂತೆ ಮಾಡಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ ಎಂದರು.
ಮಾಜಿ ಶಾಸಕ, ಕಾಳಿದಾಸ ಶಿಕ್ಷಣ ಸಮಿತಿ ಅಧ್ಯಕ್ಷ ಎಸ್.ಎನ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯ ಪ್ರೊ. ಕೆ.ಬಿ. ತಳಗೇರಿ ಉಪನ್ಯಾಸ ನೀಡಿದರು.
ನಗರಸಭೆ ಅಧ್ಯಕ್ಷ ಶಿವಣ್ಣ ಮುಳಗುಂದ, ದೇವರಾಜ ಅರಸು ವಸತಿ ನಿಲಯ ಸಮಿತಿ ಅಧ್ಯಕ್ಷ ಮಹಾದೇವಪ್ಪ ರೊಳ್ಳಿ, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಸ್. ಬಂಡಿ, ಧಾರವಾಡ ಕವಿವಿ ಸಿಂಡಿಕೇಟ್ ಸದಸ್ಯ ಜಯದೇವ ಮೆಣಸಗಿ, ನಗರಸಭೆ ಸದಸ್ಯ ಪರಶುರಾಮ ಹೆಬಸೂರ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾ ಅಧಿಕಾರಿ ಡಾ. ಡಿ. ಮೋಹನ ಹಾಜರಿದ್ದರು. ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕೀರಪ್ಪ ಹೆಬಸೂರ ಸ್ವಾಗತಿಸಿದರು. ಎಸ್.ಡಿ. ಕುರಿ ನಿರೂಪಿಸಿದರು.