ಶಿವಮೊಗ್ಗ: ತ್ವರಿತವಾಗಿ ವಿಚ್ಛೇದನಕ್ಕೆ ಅನುವು ಮಾಡಿಕೊಡಲು ಸಾಧ್ಯವಾಗುವಂತೆ ಹಿಂದೂ ವಿವಾಹ ಕಾಯ್ದೆಗೆ ತಂದಿರುವ ಕಾನೂನು ತಿದ್ದುಪಡಿಯನ್ನು ಶಿವಮೊಗ್ಗ ಜಿಲ್ಲಾ ವಿಪ್ರ ಜಾಗೃತಿ ಸಮಾವೇಶದಲ್ಲಿ ಖಂಡಿಸಿ ನಿರ್ಣಯ ಸ್ವೀಕರಿಸಲಾಯಿತು.
ನಗರದ ಸೈನ್ಸ್ ಮೈದಾನದಲ್ಲಿ ಭಾನುವಾರ ನಡೆದ ಜಿಲ್ಲಾ ವಿಪ್ರ ಜಾಗೃತಿ ಸಮಾವೇಶದ ಸಮಾರೋಪದಲ್ಲಿ ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷ ಬಿ.ವಿ. ರಾಮಸ್ವಾಮಿ ನಿರ್ಣಯಗಳನ್ನು ಮಂಡಿಸಿದರು.
ವೈವಾಹಿಕ ಜೀವನದಲ್ಲಿ ಯಾವುದೇ ಭಿನ್ನಾಭಿಪ್ರಾಯ ಬಂದರೂ ಅದನ್ನು ವಿಷಯ ನಿಷ್ಠವಾಗಿಟ್ಟು ಪರಿಹರಿಸಬೇಕೇ ಹೊರತು ನ್ಯಾಯಾಂಗದ ಮೊರೆ ಹೋಗಬಾರದು.
ಈ ರೀತಿ ಸಮಸ್ಯೆ ಪರಿಹರಿಸಲು ರಾಜ್ಯದಲ್ಲಿ ಪ್ರತಿ ತಾಲ್ಲೂಕು ಮಟ್ಟದಲ್ಲೂ ಸಮಾಜದ ಹಿರಿಯರು ಮತ್ತು ತಜ್ಞರ ತಂಡ ರಚಿಸಬೇಕು ಎಂದು ನಿರ್ಣಯಿಸಲಾಯಿತು.
ಪ್ರತಿ ಆರು ತಿಂಗಳಿಗೊಮ್ಮೆ ಸಮಾಜದ ಮಠಾಧೀಶರ ಸಮಾವೇಶ ನಡೆಸಿ, ಆತ್ಮಾವಲೋಕನ ಮಾಡಿಕೊಳ್ಳಬೇಕು. ಎಲ್ಲ ವಿಪ್ರರು ತಮ್ಮ ಮಕ್ಕಳಿಗೆ ಸಂಸ್ಕೃತ ಪಾಠ ಮತ್ತು ಶಿಕ್ಷಣ ನೀಡಬೇಕು. ಶೈಶವ ಶಿಕ್ಷಣಕ್ಕಾಗಿ 5-12ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಬ್ರಾಹ್ಮಣ್ಯವನ್ನು ಉಳಿಸಿ, ಬೆಳೆಸುವ ಸಕಲ ಧಾರ್ಮಿಕ ಶಿಕ್ಷಣವನ್ನೂ ನೀಡಬೇಕು.
ಶಿವಮೊಗ್ಗ ಸಮಾವೇಶದ ಮಾದರಿಯಲ್ಲೇ ರಾಜ್ಯದ ಇತರ 29 ಜಿಲ್ಲೆಗಳಲ್ಲೂ ಸಮಾವೇಶ ನಡೆಸಬೇಕು. ಸಮಾಜಕ್ಕೆ ಶಿವಮೊಗ್ಗ ಜಿಲ್ಲಾ ರಾಜಕೀಯದಲ್ಲಿ ಎರಡು ಸ್ಥಾನಗಳನ್ನು ನೀಡಬೇಕು ಎಂದು ನಿರ್ಣಯಗಳನ್ನು ಸಮಾವೇಶದಲ್ಲಿ ಕೈಗೊಳ್ಳಲಾಯಿತು.