ರಾಮಕುಂಜ (ಉಪ್ಪಿನಂಗಡಿ): `ಹಿಂದೂಗಳನ್ನು ಜಾಗೃತಗೊಳಿಸಿ ಸಂಘಟಿಸುವ ಮೂಲಕ ದೇಶ, ಸಮಾಜವನ್ನು ಸಂರಕ್ಷಿಸುವ ಕೆಲಸವನ್ನು ಹಿಂದೂ ಜಾಗರಣ ವೇದಿಕೆ ಮಾಡಿಕೊಂಡು ಬಂದಿದ್ದು, ದೇಶವನ್ನು ರಕ್ಷಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಹಿಂದೂವಿನ ಮೇಲಿದೆ' ಎಂದು ಹಿಂದೂ ಜಾಗರಣ ವೇದಿಕೆಯ ರಾಜ್ಯ ಸಂಚಾಲಕ ಜಗದೀಶ್ ಕಾರಂತ್ ಹೇಳಿದರು.
ಶನಿವಾರ ರಾಮಕುಂಜದಲ್ಲಿ ಕಡಬ ಹಿಂದು ಜಾಗರಣ ವೇದಿಕೆಯ 25ನೇ ವರ್ಷಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ ಹಿಂದೂ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು. `ಸಾಮಾಜಿಕ ಮುಖವಾಡ ಹೊತ್ತುಕೊಂಡ ಪಿಎಫ್ಐ ದಕ್ಷಿಣ ಕನ್ನಡ ಜಿಲ್ಲೆಯನ್ನು ಇಸ್ಲಾಮೀಕರಣ ಮಾಡಲು ಪರೋಕ್ಷ ಯುದ್ಧ ಸಾರಿದೆ. ಸ್ಕಾರ್ಪ್ ಪರ ರ್ಯಾಲಿ ನಡೆಸುವ ಮೂಲಕ ಕಾಲೇಜಿನ ಕಟ್ಟುಪಾಡು, ದೇಶದ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದೆ' ಎಂದರು.
ಹಿಂದೂ ಜಾಗರಣ ವೇದಿಕೆ ರಾಜ್ಯ ಸಹ ಸಂಚಾಲಕ ಸತ್ಯಜಿತ್ ಸುರತ್ಕಲ್ ಮಾತನಾಡಿ, `25 ವರ್ಷಗಳಿಂದ ಹಿಂದೂ ಜಾಗರಣ ವೇದಿಕೆ ಹಿಂದುತ್ವದ ರಕ್ಷಣೆಗಾಗಿ ಗ್ರಾಮ ಗ್ರಾಮಗಳಲ್ಲಿ ಶ್ರಮಿಸುತ್ತಿದೆ. ಅನ್ಯಾಯ, ಅಕ್ರಮದ ವಿರುದ್ಧ ಹೋರಾಡುತ್ತಿದೆ' ಎಂದರು.
ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುರಾರಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಆರ್ಎಸ್ಎಸ್ ಕಾರ್ಯಕಾರಿಣಿ ಸದಸ್ಯ ಪ್ರಸಾದ್ ಬಂಟ್ವಾಳ, ಮಾಧವ ಆಚಾರ್ ಮಾತನಾಡಿದರು.
ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಕರುಣಾಕರ ಬರಮೇಲು, ಪುತ್ತೂರು ತಾಲ್ಲೂಕು ಗೌರವಾಧ್ಯಕ್ಷ ಡಾ. ಎಂ.ಕೆ. ಪ್ರಸಾದ್ ಭಂಡಾರಿ, ಕಡಬ ಘಟಕದ ಅಧ್ಯಕ್ಷ ಎನ್.ಕೆ. ಪ್ರಕಾಶ್, ಸಂಚಾಲಕ ಮೋಹನ್ ಕೊಯಿಲ, ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ರಾಮಕುಂಜ ಗ್ರಾಮ ಸಮಿತಿ ಅಧ್ಯಕ್ಷ ಸದಾನಂದ ರಾಮಕುಂಜ ಇದ್ದರು.