ಕೆಜಿಎಫ್: ಕೇಂದ್ರ ಸಚಿವರಾಗಿರುವ ತಮ್ಮ ತಂದೆ ಕೆ.ಎಚ್.ಮುನಿಯಪ್ಪ ಅವರ ಮೂಲಕ ಕಾಂಗ್ರೆಸ್ ಟಿಕೆಟ್ಗೆ ಪ್ರಯತ್ನಿಸಿ ವಿಫಲರಾದ ರೂಪಕಲಾ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಬುಧವಾರ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಬಹುದು ಎಂಬ ಊಹೆ ಸುಳ್ಳಾಯಿತು.
ಕೊನೆ ಕ್ಷಣದವರೆಗೂ ಕೋಲಾರದಲ್ಲಿ ಪಕ್ಷದ ಬಿ.ಫಾರಂಗಾಗಿ ಕಾದು ಕುಳಿತಿದ್ದ ಅವರಿಗೆ ಟಿಕೆಟ್ ನೀಡಲು ಹೈಕಮಾಂಡ್ ಮನಸ್ಸು ಮಾಡಲಿಲ್ಲ.
ಬೆಳಗಿನ ಜಾವವೇ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಪರಮೇಶ್ವರ್ ಅವರ ಮನೆಗೆ ಭೇಟಿ ನೀಡಿದ್ದ ಕೋಲಾರ ಜಿಲ್ಲೆಯ ಬಹುತೇಕ ಅಧಿಕೃತ ಕಾಂಗ್ರೆಸ್ ಅಭ್ಯರ್ಥಿಗಳು ಮತ್ತು ಕೆಜಿಎಫ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಅಂತಿಮ ಪ್ರಯತ್ನ ನಡೆಸಿದರು. ವಿ.ಶಂಕರ್ ಬದಲಾಗಿ ರೂಪಕಲಾ ಅವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು. ಈ ಬೆಳವಣಿಗೆಗಳು ಬೆಂಗಳೂರಿನಲ್ಲಿ ನಡೆಯುತ್ತಿದ್ದ ಕಾರಣ, ರೂಪಕಲಾ ಅವರಿಗೆ ಟಿಕೆಟ್ ಸಿಗಬಹುದು. ಯಾವುದೇ ಕ್ಷಣದಲ್ಲಾದರೂ ನಾಮಪತ್ರ ಸಲ್ಲಿಸಲು ಬರಬಹುದು ಎಂಬ ಕಾತುರ ಕಾಂಗ್ರೆಸ್ ಪಾಳಯದಲ್ಲಿತ್ತು.
ರೂಪಕಲಾ ಅವರಿಗೆ ಟಿಕೆಟ್ ಸಿಗುವುದು ಅಸಂಭವ ಎಂದು ತಿಳಿಯುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡರಾದ ಜಯಪಾಲ್, ಸಂಪತ್ಕುಮಾರ್, ಬಾಲಕೃಷ್ಣ ಮತ್ತು ಸುಬ್ರಹ್ಮಣಿ ಬಂಡಾಯ ಕಾಂಗ್ರೆಸ್ಸಿಗರಾಗಿ ನಾಮಪತ್ರ ಸಲ್ಲಿಸಿದರು.