ಗೋಧ್ರಾ, ಗುಜರಾತ್ (ಪಿಟಿಐ) ಹತ್ತು ವರ್ಷಗಳ ಹಿಂದೆ ನಡೆದ ಗೋಧ್ರಾ ಹತ್ಯಾಕಾಂಡದ ಕಳಂಕ ತೊಡೆದು ಹಾಕಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಯತ್ನಿಸುತ್ತಿದ್ದು, ಶುಕ್ರವಾರ ಗೋಧ್ರಾದಲ್ಲಿ ಕೋಮು ಸೌಹಾರ್ದದ ಕಾರಣ ಮುಂದಿಟ್ಟುಕೊಂಡು ಸದ್ಭಾವನಾ ನಿರಶನ ನಡೆಸಿದರು.
ಗೋಧ್ರಾ ದುರಂತ ನಡೆದು ಹತ್ತು ವರ್ಷಗಳಾಗುತ್ತಿರುವ ಸಂದರ್ಭದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಭ್ರಾತೃತ್ವ ಭಾವನೆ ಉತ್ತೇಜಿಸಲು ಆ ಪಟ್ಟಣದಲ್ಲಿ ಮೋದಿ ನಡೆಸಿದ ನಿರಶನ, ವರ್ಚಸ್ಸು ಹೆಚ್ಚಿಸಿಕೊಳ್ಳಲು ಅವರು ನಡೆಸಿದ ಯತ್ನ ಎಂದು ಅರ್ಥೈಸಲಾಗುತ್ತಿದೆ.
ದಿನ ಇಡೀ ಉಪವಾಸ ಕುಳಿತ ಮೋದಿ ಜನರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, `ಮತಬ್ಯಾಂಕ್ ರಾಜಕಾರಣ ಬೇಕೋ ಅಥವಾ ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯ ರಾಜಕಾರಣ ಬೇಕೋ ಎಂದು ನಿರ್ಧರಿಸುವ ಕಾಲ ಇದಾಗಿದೆ~ ಎಂದರು.
ಇದೇ ವೇದಿಕೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮೇಲೆ ವಾಗ್ದಾಳಿ ನಡೆಸಿದ ಮೋದಿ, ಅಪೌಷ್ಟಿಕತೆಯ ಸಮಸ್ಯೆಯ ಕುರಿತು ಅರಿಯಲು ಅರ್ಥಶಾಸ್ತ್ರಜ್ಞರೂ ಆದ ಪ್ರಧಾನಿಗೆ ಇಷ್ಟು ವರ್ಷ ಬೇಕಾಯಿತೇ ಎಂದು ವ್ಯಂಗ್ಯವಾಡಿದರು.