ಮಾಲ್ಕನ್ಗಿರಿ (ಒಡಿಶಾ): ಬಂದೂಕುಗಳನ್ನು ಹೊತ್ತ ಪುರುಷರು ಮತ್ತು ಮಹಿಳೆಯರು 24 ಗಂಟೆಯೂ ತಮ್ಮ ಮೇಲೆ ಕಣ್ಣಿಟ್ಟಿದ್ದರಾದರೂ 9 ದಿನಗಳ ಬಂಧನದ ಅವಧಿಯಲ್ಲಿ ಮಾನಸಿಕವಾಗಿ ಅಥವಾ ದೈಹಿಕವಾಗಿ ಯಾವುದೇ ರೀತಿಯ ಹಿಂಸೆಯನ್ನೂ ಅವರು ತಮಗೆ ನೀಡಲಿಲ್ಲ ಎಂದು ನಕ್ಸಲೀಯರಿಂದ ಅಪಹೃತಗೊಂಡು ಬಿಡುಗಡೆಯಾಗಿ ಬಂದಿರುವ ಮಾಲ್ಕನ್ಗಿರಿ ಜಿಲ್ಲಾಧಿಕಾರಿ ವಿನೀಲ್ ಕೃಷ್ಣ ಹೇಳಿದ್ದಾರೆ.
ಬಂಧನದ ಅವಧಿಯಲ್ಲಿನ ಅನುಭವಗಳನ್ನು ಹಂಚಿಕೊಳ್ಳುವಂತೆ ಪತ್ರಕರ್ತರು ಆಹ್ವಾನಿಸಿದಾಗ, ‘ನನ್ನ ಜೀವನದಲ್ಲಿ ಆ ದಿನಗಳನ್ನು ಎಂದಿಗೂ ಮರೆಯಲಾರೆ’ ಎಂದು ಅವರು ಶುಕ್ರವಾರ ಪ್ರತಿಕ್ರಿಯಿಸಿದರು.
‘ಕಾಡಿನಿಂದ ಹೊರಪ್ರಪಂಚದ ಆಗುಹೋಗುಗಳನ್ನು ಅರಿಯಲು ನಕ್ಸಲೀಯರಿಗೆ ಇರುವ ಏಕೈಕ ಸಾಧನವೆಂದರೆ ರೇಡಿಯೊ ಮಾತ್ರ. ಕಿರಿಯ ಎಂಜಿನಿಯರ್ ಮಝಿ ಮತ್ತು ನನ್ನನ್ನು ದಟ್ಟ ಕಾಡಿನ ಮಧ್ಯೆ ಇರಿಸಲಾಗಿತ್ತು. ಕನಿಷ್ಠ ನಾಲ್ಕು ಬಾರಿಯಾದರೂ ನಮ್ಮ ಸ್ಥಳವನ್ನು ಬದಲಿಸಲಾಗಿತ್ತು. ಅವರು ನಮಗೆ ಅನ್ನ, ಬೇಳೆ ಸಾರು ಮತ್ತು ಕಾಯಿಸಿದ ನೀರು ಒದಗಿಸುತ್ತಿದ್ದರು’ ಎಂದು ವಿವರಿಸಿದರು.
ಅಪಹೃತಗೊಂಡ ಕೂಡಲೇ ಗನ್ನಿಂದ ಹೆದರಿಸಿ ನಿಮ್ಮಿಂದ ಬೇಡಿಕೆಯ ಪತ್ರ ಬರೆಸಲಾಯಿತೇ ಎಂಬ ಪ್ರಶ್ನೆಗೆ, ‘ಪತ್ರ ಬರೆಯುವಂತೆ ಸರಳವಾಗಿ ನನಗೆ ತಿಳಿಸಲಾಯಿತು’ ಎಂದರು. ನಕ್ಸಲೀಯರು ಒರಿಯಾ, ತೆಲುಗು ಭಾಷಿಗರಾಗಿದ್ದು, ಛತ್ತೀಸ್ಗಡದವರೂ ಕೆಲವರಿದ್ದಾರೆ ಎಂದದರು.