ಥಾಯ್ಲೆಂಡ್ನಲ್ಲಿ ಕೆಲವು ವಾರಗಳಿಂದ ನಡೆದಿದ್ದ ಸರ್ಕಾರ ವಿರೋಧಿ ದಂಗೆ, ಭಾರೀ ಪ್ರತಿಭಟನೆಗೆ ಮಣಿದ ಪ್ರಧಾನಿ ಯಿಂಗ್ಲಕ್ ಶಿನವತ್ರಾ ಕೊನೆಗೂ ಸಂಸತ್ತನ್ನು ವಿಸರ್ಜಿಸಿರುವುದು ವಿವೇಕಪೂರ್ಣ ನಡೆ. ಇಲ್ಲದೇ ಹೋಗಿದ್ದರೆ ಇನ್ನಷ್ಟು ಜೀವಹಾನಿ, ಆಸ್ತಿ ಹಾನಿ ನಡೆಯುವ ಎಲ್ಲ ಲಕ್ಷಣಗಳೂ ಇದ್ದವು.
ಅದಕ್ಕೆಲ್ಲ ಈಗ ತಾತ್ಕಾಲಿಕ ತಡೆ ಬಿದ್ದಂತಾಗಿದೆ. ಆದರೆ ಪ್ರತಿಭಟನೆಯ ನೇತೃತ್ವ ವಹಿಸಿರುವ ಪ್ರತಿಪಕ್ಷ ಮುಖಂಡ ಸುಥೆಪ್ ತೌಗ್ಸುಬಾನ್ ಅವರಿಗೆ ಪ್ರಧಾನಿಯ ನಿರ್ಧಾರ ಸಮಾಧಾನವನ್ನೇನೂ ತಂದಿಲ್ಲ. ‘ಪ್ರಧಾನಿ ಹುದ್ದೆಯಿಂದ ಯಿಂಗ್ಲಕ್ ಇಳಿಯಬೇಕು, ಪ್ರಜಾಸತ್ತಾತ್ಮಕ ಸುಧಾರಣಾ ಸಮಿತಿಗೆ ಅಧಿಕಾರ ಒಪ್ಪಿಸಬೇಕು’ ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಇದನ್ನು ಪ್ರಧಾನಿ ತಿರಸ್ಕರಿಸಿದ್ದಾರೆ.
ಅಷ್ಟಕ್ಕೂ ಈ ಬಿಕ್ಕಟ್ಟು ಪ್ರಧಾನಿಯ ಸ್ವಯಂಕೃತ ಅಪರಾಧದಿಂದ ಶುರುವಾದದ್ದು. ಭ್ರಷ್ಟರಿಗೆ ಕ್ಷಮಾದಾನ ನೀಡುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದೇ ಅವರ ವಿರುದ್ಧ ಜನಾಂದೋಲನಕ್ಕೆ ಇಳಿಯಲು ಪ್ರತಿಪಕ್ಷಗಳಿಗೆ ಅಸ್ತ್ರ ಒದಗಿಸಿತು. ಸಂಸತ್ತಿನ ಕೆಳಮನೆಯಲ್ಲಿ ಅಂಗಿಕಾರವಾದ ಮಸೂದೆ ಮೇಲ್ಮನೆಯಲ್ಲಿ ಪರಾಭವಗೊಂಡ ನಂತರವೂ ಸರ್ಕಾರಿ ವಿರೋಧಿ ದಂಗೆ ನಿಲ್ಲುವ ಬದಲು ಹೆಚ್ಚಿತು.
ಇದರಿಂದ ವಿಚಲಿತಗೊಂಡ ಪ್ರಧಾನಿ, ಇನ್ನೆಂದೂ ಇಂಥ ಮಸೂದೆ ಸಂಸತ್ತಿನ ಮುಂದೆ ಬರುವುದೇ ಇಲ್ಲ ಎಂದು ಹೇಳಿದರೂ ಫಲ ಸಿಗಲಿಲ್ಲ.
‘ಭ್ರಷ್ಟಾಚಾರ ನಡೆಸಿ ಸೇನಾ ಕ್ರಾಂತಿಯಲ್ಲಿ ಪದಚ್ಯುತಗೊಂಡು ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮಾಜಿ ಪ್ರಧಾನಿಯೂ ಆದ ತಮ್ಮ ಸೋದರ ಥಕ್ಸಿನ್ ಶಿನವತ್ರಾ ಅವರನ್ನು ದೋಷಮುಕ್ತಗೊಳಿಸಿ ದೇಶಕ್ಕೆ ಮರಳುವಂತೆ ಮಾಡುವ ಉದ್ದೇಶದಿಂದ ಇಂಥ ಮಸೂದೆ ತಂದಿದ್ದರು’ ಎಂಬ ಕಳಂಕ ಪ್ರಧಾನಿ ಯಂಗ್ಲಿಕ್ಗೆ ಅಂಟಿಕೊಂಡಿತು. ಅದರಿಂದ ಹೊರಬರುವಲ್ಲಿ ಅವರು ವಿಫಲರಾದರು.
ಜತೆಗೆ ಥಕ್ಸಿನ್ ವಿದೇಶದಲ್ಲಿ ಇದ್ದುಕೊಂಡೇ ಸೋದರಿಯ ಮೂಲಕ ಥಾಯ್ಲೆಂಡ್ನ ಆಡಳಿತ ನಿಯಂತ್ರಿಸುತ್ತಿದ್ದಾರೆ ಎಂಬ ಆಕ್ರೋಶವೂ ಪ್ರತಿಭಟನೆಗೆ ತುಪ್ಪ ಸುರಿಯಿತು. ಡೆಮಾಕ್ರಟಿಕ್ ಪಕ್ಷದ ಸಂಸದರು ಸಾಮೂಹಿಕ ರಾಜೀನಾಮೆ ಕೊಟ್ಟಾಗ ಸಂಸತ್ ವಿಸರ್ಜಿಸದೆ ಪ್ರಧಾನಿಗೆ ಬೇರೆ ದಾರಿಯೇ ಉಳಿಯಲಿಲ್ಲ. ದೇಶದ ಸಂವಿಧಾನದ ಪ್ರಕಾರ ಬರುವ ಫೆಬ್ರುವರಿ ಎರಡರ ಒಳಗೆ ಚುನಾವಣೆಗಳು ನಡೆಯಬೇಕಿದೆ. ಅದರಲ್ಲಿಯೂ ಶಿನವತ್ರಾ ಅವರ ಪಕ್ಷವೇ ಮತ್ತೆ ಅಧಿಕಾರಕ್ಕೆ ಬರಬಹುದು ಎಂಬುದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರ.
ಏಕೆಂದರೆ ಬಡವರು, ಜನಸಾಮಾನ್ಯರಲ್ಲಿ ಶಿನವತ್ರಾ ಕುಟುಂಬದ ಬಗ್ಗೆ ಹೆಚ್ಚು ಒಲವಿದೆ. ಅಂಥ ಸಂದರ್ಭ ಬಂದರೆ ಬಿಕ್ಕಟ್ಟು ಮತ್ತೆ ಮುಂದುವರಿಯಲೂಬಹುದು. ಜನತಂತ್ರದಲ್ಲಿ ಶಾಂತಿಯುತ ಪ್ರತಿಭಟನೆ ತಪ್ಪಲ್ಲ. ಆದರೆ ಅದನ್ನು ರಾಜಕಾರಣದ ದಾಳವಾಗಿ ಬಳಸಲು ಮುಂದಾದರೆ ಪ್ರಜಾಸತ್ತೆ ದುರ್ಬಲವಾಗುತ್ತದೆ.
ಈ ವಿಷಯದಲ್ಲಿ ಎಡವಿದರೆ, ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುವ ಸೇನೆಗೆ ಅವಕಾಶ ಕೊಟ್ಟಂತಾದೀತು. ಥಾಯ್ ರಾಜಕಾರಣಿಗಳು ಜನತಂತ್ರವನ್ನು ಬಲಹೀನ ಮಾಡುವ ಗೋಜಿಗೆ ಹೋಗದೆ ಪ್ರಜಾಸತ್ತೆ ಚೌಕಟ್ಟಿನಲ್ಲೇ ಪರಿಹಾರ ಕಂಡುಕೊಳ್ಳುವುದು ಅಪೇಕ್ಷಣೀಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.