ಅಲಹಾಬಾದ್ (ಪಿಟಿಐ): ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿ, `ಈ ಪೈಶಾಚಿಕ ಕೃತ್ಯಕ್ಕೆ ವ್ಯಕ್ತವಾಗುತ್ತಿರುವ ಆಕ್ರೋಶ ಸಮರ್ಥನೀಯ. ಆದರೆ ಹಿಂಸೆಯಿಂದ ಮಾತ್ರವೇ ಪರಿಹಾರ ಸಿಗುವುದಿಲ್ಲ' ಎಂದು ಹೇಳಿದ್ದಾರೆ.
ಅತ್ಯಾಚಾರ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಗಾಯಗೊಂಡಿದ್ದ ಪೊಲೀಸ್ ಕಾನ್ಸ್ಟೇಬಲ್ ಸಾವಿಗೆ ಸಂತಾಪ ವ್ಯಕ್ತಪಡಿಸಿದ ಅವರು, `ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ. ದಯವಿಟ್ಟು ಭಾವೋದ್ರೇಕದಿಂದ ವರ್ತಿಸಬೇಡಿ' ಎಂದು ಪ್ರತಿಭಟನಾಕಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮೋತಿಲಾಲ್ ನೆಹರೂ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ ಘಟಿಕೋತ್ಸವದಲ್ಲಿ ಮಾತನಾಡಿದ ಮುಖರ್ಜಿ ಮಾತನಾಡಿ, `ಮಹಿಳೆಯರ ಬಗ್ಗೆ ನಕಾರಾತ್ಮಕ ಭಾವನೆ ಇರುವುದರಿಂದಲೇ ಆಗಾಗ ಇಂಥ ಪೈಶಾಚಿಕ ಘಟನೆಗಳು ನಡೆಯುತ್ತವೆ. ಈ ಬಗೆಯ ಕೀಳು ಭಾವನೆಯನ್ನು ಬಿಟ್ಟು ಮಹಿಳೆಯರನ್ನು ಗೌರವಿಸುವುದನ್ನು ಕಲಿಯಬೇಕು' ಎಂದು ಪ್ರಣವ್ ಕರೆ ನೀಡಿದರು.