ಪಟ್ನಾ (ಪಿಟಿಐ): ಇಲ್ಲಿಗೆ ಸಮೀಪದ ಅರಾದಲ್ಲಿ ಹತ್ಯೆಗೊಳಗಾದ `ರಣವೀರ ಸೇನೆ~ ಮುಖ್ಯಸ್ಥ ಬ್ರಹ್ಮೇಶ್ವರ ಸಿಂಗ್ ಅಲಿಯಾಸ್ `ಮುಖಿಯಾ~ ಅವರ ಅಂತ್ಯಸಂಸ್ಕಾರದ ವೇಳೆ ಶನಿವಾರ ನಡೆದ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿತು.
ಮೆರವಣಿಗೆಯಲ್ಲಿ ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಸಿಂಗ್ ಅವರ ಬೆಂಬಲಿಗರು ಪೊಲೀಸ್ ಔಟ್ಪೋಸ್ಟ್ಗಳು, ಖಾಸಗಿ ಮತ್ತು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದರಲ್ಲದೆ, ಜನದಟ್ಟಣೆಯ ಬೈಲಿ ರಸ್ತೆಯಲ್ಲಿ ಗಂಟೆಗಟ್ಟಲೆ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದರು. ಅರಾದಿಂದ 40 ಕಿ.ಮೀ ದೂರದಲ್ಲಿರುವ ಪಟ್ನಾವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಬಿಹಾರ ಬಿಜೆಪಿ ಅಧ್ಯಕ್ಷ ಸಿ.ಪಿ.ಠಾಕೂರ್ ಮತ್ತು ಕೆಲ ಬಿಜೆಪಿ ಶಾಸಕರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ಮೇಲ್ವರ್ಗದ ಭೂಮಾಲೀಕರ ಕಾನೂನುಬಾಹಿರ ಖಾಸಗಿ ಪಡೆಯಾದ `ರಣವೀರ ಸೇನೆಯ~ ಮುಖ್ಯಸ್ಥ ಸಿಂಗ್ ಅವರನ್ನು ಶುಕ್ರವಾರ ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಕೊಲೆ ಮಾಡಿದ್ದರು.