ನರಸಿಂಹರಾಜಪುರ: ಇಲ್ಲಿನ ಹಳೇ ತಾಲ್ಲೂಕು ಕಚೇರಿ ಕಟ್ಟಡವನ್ನು ತೆರವುಗೊಳಿಸುವ ಕಾರ್ಯಕ್ಕೆ ತಡೆ ಒಡ್ಡಿ ನಾಗರಿಕ ಹಿತರಕ್ಷಣಾ ವೇದಿಕೆಯ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಾಗರಿಕ ಹಿತರಕ್ಷಣ ವೇದಿಕೆಯ ಅಧ್ಯಕ್ಷ ಕೆ.ಪಿ.ಸುರೇಶ್ ಕುಮಾರ್, ತಾಲ್ಲೂಕು ಕಚೇರಿ ಕಟ್ಟಡ 100 ವರ್ಷಗಳ ಹಳೆಯ ಪಾರಂಪರಿಕ ಕಟ್ಟಡವಾಗಿದ್ದು ಇದನ್ನು ಉಳಿಸಿಕೊಳ್ಳಬೇಕು. ಶಾಸಕರು ತಮ್ಮ ವೈಯಕ್ತಿಕ ಹಿತಾಸಕ್ತಿಗೊಸ್ಕರ ಕಚೇರಿಯನ್ನು ಮಿನಿ ವಿಧಾನ ಸೌಧ ಕಟ್ಟಡಕ್ಕೆ ವರ್ಗಾಯಿಸಿ ಇಬ್ಬಗೆ ನೀತಿ ಅನುಸರಿಸಿ ವಷನಭ್ರಷ್ಟಚಾರಾಗಿದ್ದಾರೆ ಎಂದು ಆರೋಪಿಸಿದರು. ಇಂತಹ ಪಾರಂಪರಿಕ ಕಟ್ಟಡವನ್ನು ಕೆಡವಲು ಬಿಡದೆ ಇದನ್ನು ಉಳಿಸಿಕೊಳ್ಳಬೇಕೆಂದು ಕರೆ ನೀಡಿದರು.
ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಅಂಶುಮಂತ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಆರ್.ರವಿಶಂಕರ್, ಸತ್ಯನಾರಾಯಣ ಶ್ರೇಷ್ಠಿ, ಅಫ್ರೋಜ್, ವಸಂತ್ಕುಮಾರ್, ಅಬ್ಧುಲ್ಸುಬಾನ್, ಕೆ.ವಿ.ಜಯಕರ, ಮಾಳೂರು ದಿಣ್ಣೆರಮೇಶ್, ಸುಬಾನ್, ಎಚ್.ಎನ್.ರವಿಶಂಕರ್, ಕರ್ನಾಟಕ ರಕ್ಷಣಾ ವೇದಿಕೆಯ ಶಂಕರ್, ನಹೀಂ, ಸೈಯದ್ ಸಿಗ್ಬತುಲ್ಲಾ, ಸೈಯದ್ಖಲೀಲ್ ಸಾಬ್ ಮತ್ತಿತರರು ಇದ್ದರು.
ಹಳೇ ತಾಲ್ಲೂಕು ಕಚೇರಿಯನ್ನು ಕೆಡವಲು ತೆಗೆದಿದ್ದ ಹೆಂಚುಗಳನ್ನು ಪುನ: ಅದೇ ರೀತಿ ಜೋಡಿಸಿದರು. ಈ ಸಂದರ್ಭದಲ್ಲಿ ಎಂಜಿನಿಯರ್ ರವಿಕುಮಾರ್ ಮತ್ತು ನಾಗರಿಕ ಹಿತರಕ್ಷಣಾ ವೇದಿಕೆಯ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಕಟ್ಟಡ ಕೆಡವಲು ಬಂದಿದ್ದವರು ಸ್ಥಳದಿಂದ ತೆರಳಿದ್ದರಿಂದ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.