ಶಿವಮೊಗ್ಗ: ಪಿ.ಬಿ. ಶ್ರೀನಿವಾಸ್ ಅವರ ಹಿನ್ನೆಲೆ ಗಾಯನದಿಂದಲೇ ಡಾ.ರಾಜ್ಕುಮಾರ್ ಉನ್ನತ ಸ್ಥಾನಕ್ಕೆ ಏರಲು ಸಾಧ್ಯವಾಯಿತು. ರಾಜ್ಕುಮಾರ್ ಕೂಡ ಗಾಯನವನ್ನು ಮೈಗೂಡಿಸಿಕೊಂಡು ಇನ್ನಷ್ಟು ಎತ್ತರಕ್ಕೆ ಬೆಳೆದರು ಎಂದು ಯಕ್ಷಗಾನ ಕಲಾವಿದ ಎಂ.ಕೆ. ರಮೇಶಾಚಾರ್ಯ ಅಭಿಪ್ರಾಯಪಟ್ಟರು.
ನಗರದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಹಂಸಧ್ವನಿ ಸಂಗೀತ ತಾಣ ಡಾ.ರಾಜ್ಕುಮಾರ್ ಸವಿನೆನಪಿನ ಗೀತಗಾಯನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಕುಮಾರ್, ಕಲ್ಯಾಣಕುಮಾರ್, ಪಿ.ಬಿ. ಶ್ರೀನಿವಾಸ್ ಸತ್ತು ಬದುಕಿದ್ದಾರೆ. ಅವರ ಹಾಡು, ನಟನೆ ಮೂಲಕ ಇಂದಿಗೂ ಕನ್ನಡಿಗರ ಹೃದಯಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಕೆಲವು ಕಲಾವಿದರುಬದುಕಿದ್ದೂ ಸತ್ತಿದ್ದಾರೆ ಎಂದು ವಿಷಾದಿಸಿದರು.
ಸಂಗೀತ ಕಾರ್ಯಕ್ರಮ ನಡೆಸುವುದು ಇಂದಿನ ದಿನಗಳಲ್ಲಿ ತುಂಬಾ ಕಷ್ಟ. ವಾದ್ಯಗೋಷ್ಠಿ ನಡೆಸುವವರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಸಾರ್ವಜನಿಕರ ಪ್ರೋತ್ಸಾಹದಿಂದಲೇ ಕಲಾವಿದರು ಇನ್ನೂ ಜೀವನ ನಡೆಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ರವಿಚಂದ್ರನ್, ಎಸ್. ಶಶಿ, ವಿಜಯ್ ದಯಾಕರ್ ಉಪಸ್ಥಿತರಿದ್ದರು. ನಂತರ ಹಂಸಧ್ವನಿ ಸಂಗೀತ ತಾಣ ಸಂಸ್ಥೆಯ ಧನಪಾಲ್ ಸಿಂಗ್ ರಜಪೂತ್ ಮತ್ತು ತಂಡದಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು.