ಶ್ರೀನಗರ (ಪಿಟಿಐ): ಮೂರು ದಿನಗಳಿಂದ ಭಾರಿ ಪ್ರಮಾಣದಲ್ಲಿ ಹಿಮಕುಸಿತ ಮತ್ತು ಹಿಮಪಾತ ಸಂಭವಿಸುತ್ತಿರುವ ಕಾಶ್ಮೀರ ಕಣಿವೆಯ ಸೋನಮಾರ್ಗ್ ಪ್ರದೇಶದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಒಂಬತ್ತು ನಾಗರಿಕರನ್ನು ಸೇನೆಯ ನೆರವಿನಿಂದ ಶುಕ್ರವಾರ ರಕ್ಷಿಸಲಾಗಿದೆ.
ಈ ಮಧ್ಯೆ, ಗುರೆಜ್ ಕಣಿವೆಯಲ್ಲಿ ಬುಧವಾರ ಸಂಭವಿಸಿದ ಹಿಮ ಕುಸಿತದಲ್ಲಿ ನಾಪತ್ತೆಯಾಗಿರುವ ಮೂವರು ಯೋಧರು ಇನ್ನೂ ಪತ್ತೆಯಾಗಿಲ್ಲ.
`ಮೂವರು ಸರ್ಕಾರಿ ನೌಕರರು ಸೋನಮಾರ್ಗ್ನಿಂದ ಗಂದೆರ್ಬಾಲ್ಗೆ ಕಾಲ್ನಡಿಗೆಯಲ್ಲಿ ಬುಧವಾರ ಹೊರಟಿದ್ದರು. ದಾರಿ ಮಧ್ಯೆ ಭಾರಿ ಹಿಮಪಾತ ಮತ್ತು ಹಿಮಕುಸಿತದಿಂದಾಗಿ ಇಬ್ಬರು ಕಣ್ಮರೆಯಾಗಿದ್ದರು.
ಒಬ್ಬರು ಮಾತ್ರ ಗಂದೆರ್ಬಾಲ್ಗೆ ತಲುಪಿ, ಕಣ್ಮರೆ ಆದವರ ಬಗ್ಗೆ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿದರು~ ಎಂದು ನೈಸರ್ಗಿಕ ವಿಪತ್ತು ನಿರ್ವಹಣಾ ಘಟಕದ ಸಂಚಾಲಕರಾಗಿರುವ ಅಮೀರ್ ಅಲಿ ಹೇಳಿದ್ದಾರೆ.
`ನಾಪತ್ತೆಯಾಗಿದ್ದವರಲ್ಲಿ ಒಬ್ಬರು ಸ್ಥಳೀಯ ಆಡಳಿತವನ್ನು ದೂರವಾಣಿ ಮೂಲಕ ಸಂಪರ್ಕಿಸಿ ಶಿಟ್ಕಾರಿ ಸೇತುವೆಯ ಕೆಳಗೆ ಆಶ್ರಯ ಪಡೆದಿರುವುದಾಗಿ ಮಾಹಿತಿ ನೀಡಿದರು. ತಕ್ಷಣ ರಕ್ಷಣಾ ತಂಡವನ್ನು ಸ್ಥಳಕ್ಕೆ ಕಳುಹಿಸಲಾಯಿತು. ಇಬ್ಬರು ಸರ್ಕಾರಿ ನೌಕರರು ಸೇರಿದಂತೆ ಒಂಬತ್ತು ಜನರು ಅಲ್ಲಿದ್ದರು~ ಎಂದು ಅಲಿ ತಿಳಿಸಿದರು.
`ಒಂಬತ್ತು ಜನರನ್ನು ಸೇನೆಗೆ ಸೇರಿದ ಚೀತಾ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಯಿತು~ ಎಂದರು.