ಶಿಮ್ಲಾ(ಐಎಎನ್ಎಸ್): ಹಿಮಾಚಲ ಪ್ರದೇಶದಚೆರ್ರಿಬೆಳೆಗಾರರು ಈ ಬಾರಿ ಬಂಪರ್ ಬೆಳೆ ನಿರೀಕ್ಷೆಯಲ್ಲಿದ್ದಾರೆ. ಪ್ರಸಕ್ತ ಋತುವಿನಲ್ಲಿ 520 ಟನ್ ಇಳುವರಿ ಅಂದಾಜು ಮಾಡಲಾಗಿದೆ ಎಂದು ಇಲ್ಲಿನ ತೋಟಗಾರಿಕೆ ಇಲಾಖೆ ಹೇಳಿದೆ.
ಕಳೆದ ವರ್ಷ 433 ಟನ್ ಚೆರ್ರಿಹಣ್ಣು ಉತ್ಪಾದನೆಯಾಗಿತ್ತು. ಅದಕ್ಕೂ ಹಿಂದಿನ ವರ್ಷ ಅಂದರೆ, 2010-11ರಲ್ಲಿ 1,039 ಟನ್ಗಳಷ್ಟು ದಾಖಲೆ ಪ್ರಮಾಣದ ಇಳುವರಿ ಬಂದಿತ್ತು. ಈ ವರ್ಷದ ಉತ್ಪಾದನೆ ಮೇಲೆ ಪ್ರತಿಕೂಲ ಹವಾಮಾನ ಅಷ್ಟೇನೂ ಪರಿಣಾಮ ಬೀರಿಲ್ಲ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ನಿರ್ದೇಶಕ ಗುರುದೇವ್ ಸಿಂಗ್.
ಹೆಚ್ಚಾಗಿಚೆರ್ರಿಬೆಳೆಯುವ ಶಿಮ್ಲಾ, ಕುಲ್ಲು, ಮಂಡಿ, ಚಂಬ ಮತ್ತು ಕಿನ್ನೂರ್ ಪ್ರದೇಶಗಳಲ್ಲಿ ಹೆಚ್ಚಿನ ಇಳುವರಿ ನಿರೀಕ್ಷಿಸಲಾಗಿದೆ. ಈ ಪ್ರದೇಶಗಳು ಸಮುದ್ರ ಮಟ್ಟದಿಂದ 6 ಸಾವಿರದಿಂದ 8 ಸಾವಿರ ಅಡಿ ಎತ್ತರದಲ್ಲಿವೆ. ಇಲ್ಲಿನ 10 ಸಾವಿರಕ್ಕೂ ಹೆಚ್ಚು ರೈತರು 480 ಹೇಕ್ಟರ್ಗೂ ಅಧಿಕ ಪ್ರದೇಶದಲ್ಲಿ `ಸ್ಟೆಲ್ಲಾ~, `ನೀರಾ~ ಸೇರಿದಂತೆ 20 ಬಗೆಯ ತಳಿಗಳಚೆರ್ರಿಹಣ್ಣು ಬೆಳೆಯುತ್ತಾರೆ.
ಸದ್ಯ ದೆಹಲಿಯಲ್ಲಿ ಪ್ರತಿ ಕೆ.ಜಿ.ಚೆರ್ರಿಹಣ್ಣಿಗೆ ರೂ.100ರಿಂದ ರೂ.275ವರೆಗೆ ಬೆಲೆ ಇದೆ. ಸಾವಯವ ಪದ್ಧತಿಯಲ್ಲಿ ಬೆಳೆಯುವ, ರಫ್ತು ಗುಣಮಟ್ಟದ `ಕಪ್ಪು ಚೆರ್ರಿ~ ಹಣ್ಣಿಗೆ ರೂ.250ರಿಂದ ರೂ.400ರವರೆಗೆ ಧಾರಣೆ ಇದೆ ಎನ್ನುತ್ತಾರೆ ಶಿಮ್ಲಾದ ರೈತ ಗೋಪಾಲ್ ಮೆಹ್ತಾ.
ಹಿಮಾಚಲ ಪ್ರದೇಶದ ಆರ್ಥಿಕತೆ ಮುಖ್ಯವಾಗಿ ತೋಟಗಾರಿಕೆಮತ್ತು ಪ್ರವಾಸೋದ್ಯಮವನ್ನು ಅವಲಂಬಿಸಿದೆ. ಇಲ್ಲಿ ವಾರ್ಷಿಕ 2 ಸಾವಿರ ಕೋಟಿಗಳಷ್ಟು ಮೌಲ್ಯದ ಹಣ್ಣಿನ ವ್ಯಾಪಾರ ನಡೆಯುತ್ತದೆ. ಕಳೆದ ಏಪ್ರಿಲ್ -ಡಿಸೆಂಬರ್ ಅವಧಿಯಲ್ಲಿ 3,28,000 ಟನ್ಗಳಷ್ಟು ಹಣ್ಣುಗಳ ಉತ್ಪಾದನೆ ಆಗಿತ್ತು.