ಬಂಗಾರಪೇಟೆ: ತಾಲ್ಲೂಕಿನ ಗಡಿ ಪ್ರದೇಶದಲ್ಲಿ ತಿಂಗಳಿಂದ ರೈತರ ಜಮೀನುಗಳಿಗೆ ನುಗ್ಗಿ ಅಪಾರ ಬೆಳೆ ನಾಶ ಮಾಡಿದ್ದ ಆನೆ ಹಿಂಡನ್ನು ಶುಕ್ರವಾರ ರಾತ್ರಿಯೇ ಗಡಿಯಿಂದ ಆಚೆಗೆ ಹಿಮ್ಮೆಟ್ಟಿಸಲಾಗಿದೆ.
ಆದರೆ, ಯಾವುದೇ ಕ್ಷಣದಲ್ಲೂ ಆನೆಗಳು ಬರಬಹುದು ಎಂಬ ಆತಂಕ ಮಾತ್ರ ಗಡಿಯಂಚಿನ ಗ್ರಾಮಗಳ ಜನ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಯಲ್ಲಿ ಮುಂದುವರಿದಿದೆ. ಈ ಆತಂಕದ ನಡುವೆಯೇ ಅರಣ್ಯ ಇಲಾಖೆ ಸಿಬ್ಬಂದಿ ಆಂಧ್ರ ಪ್ರದೇಶ ಗಡಿಯಲ್ಲಿ ಕಾವಲು ಕಾಯುತ್ತಿದ್ದಾರೆ.
ನ.20ರಂದು ಗಡಿ ಭಾಗದ ತಪಟಮಾಕನಹಳ್ಳಿ ಮೂಲಕ ಪ್ರವೇಶಿಸಿದ ಆನೆ ಹಿಂಡು ಯರಗೋಳು ಮೂಲಕ ಬಂಗಾನೆತ್ತ, ಚಾಮನಹಳ್ಳಿ ಮೂಲಕ ಕಳವಂಚಿ, ಚಿನ್ನಕಾಮನಹಳ್ಳಿ, ಪೋಲೇನಹಳ್ಳಿ, ಕುಂದರಸನಹಳ್ಳಿ ಬತ್ತಲಹಳ್ಳಿ ಕಾಡಿಗೆ ತಲುಪಿದ್ದವು.
ಅಲ್ಲಿಂದ ತಮಿಳುನಾಡಿನತ್ತ ಮುಖ ಮಾಡಿದ್ದ ಆನೆ ಹಿಂಡು ಮೂತನೂರು ಕಾಡಿಗೆ ಸಂಚರಿಸಿದ್ದವು. ಮತ್ತೆ ನಡೆದ ಹಾದಿಯಲ್ಲಿ ಹಿಂತಿರುಗಿದ್ದ ಆನೆಗಳು ಕೀರುಮಂದೆ, ಬೊಂಪಲ್ಲಿ, ನಡಂಪಲ್ಲಿ, ಹಾರ್ಮಾನಹಳ್ಳಿ, ಬೋಡೇಪಲ್ಲಿ ಮೂಲಕ ಗುರುವಾರ ರಾತ್ರಿ ಕಾಮಸಮುದ್ರ ಕಾಡಿನ 6ನೇ ಬ್ಲಾಕ್ ಬಳಿ ಕಂಡುಬಂದಿದ್ದವು.
ಹಲ ಗುಂಪುಗಳಾಗಿ ಸಂಚರಿಸಿದ್ದ ಆನೆಗಳು ಗಡಿ ಭಾಗದಲ್ಲಿ ಬೆಳೆದಿದ್ದ ಬತ್ತ, ರಾಗಿ, ಜೋಳ, ಟೊಮೆಟೊ, ಕಲ್ಲಂಗಡಿ, ಬಾಳೆ, ತೆಂಗು ಆಲೂಗಡ್ಡೆ ತಿಂದು ನಾಶ ಮಾಡಿದ್ದವು. ಪ್ರಾರಂಭದಲ್ಲಿ 25 ಆನೆಗಳು ಮಾತ್ರ ಗಡಿಯೊಳಕ್ಕೆ ನುಸುಳಿದೆ ಎಂದು ಅರಣ್ಯ ಇಲಾಖೆ ತಿಳಿದಿತ್ತು. ನಂತರ ಒಟ್ಟು 42 ಆನೆಗಳ ದೊಡ್ಡ ಗುಂಪು ಇರುವುದನ್ನು ಮನಗೊಂಡ ಅಧಿಕಾರಿಗಳು ಆತಂಕಕ್ಕೆ ಒಳಗಾಗಿದ್ದರು.
ಎರಡು ವಾರಗಳಿಂದ ಎರಡು ಮೂರು ಗುಂಪುಗಳಾಗಿ ಚದುರಿಹೋಗಿದ್ದ ಆನೆ ಹಿಂಡನ್ನು ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹರಸಾಹಸ ಪಟ್ಟಿದ್ದರು. ಬನ್ನೇರುಘಟ್ಟ, ಕಡ್ಲೀಪುರದಿಂದ ಕರೆಸಿದ್ದ ವಿಶೇಷ ತಂಡಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು.
ಪೊಲೀಸರು ಸೇರಿದಂತೆ ಒಟ್ಟು 120 ಮಂದಿ ಹಗಲು ಇರಳು ಎನ್ನದೆ ಕಾಡಿನ ಅಂಚಿನಲ್ಲಿ ಆನೆ ನಿಯಂತ್ರಣಕ್ಕೆ ಹೆಣಗಾಡಿದ್ದರು. ಎಲ್ಲ ಆನೆಗಳನ್ನು ಒಟ್ಟಿಗೆ ಸೇರಿಸಿ ಶುಕ್ರವಾರ ರಾತ್ರಿ ಬತ್ತಲಹಳ್ಳಿಯ ಮಲ್ಲಪ್ಪನ ಬೆಟ್ಟ ಮಾರ್ಗದ ಮೂಲಕ ಗಡಿಯಾಚೆಗೆ ಓಡಿಸಲಾಗಿದೆ ಎಂದು ಬಂಗಾರಪೇಟೆ ವಲಯ ಅರಣ್ಯ ಅಧಿಕಾರಿ ಚಂದ್ರಶೇಖರ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಮೂರು ವರ್ಷಗಳಿಂದ ಸತತವಾಗಿ ಗಡಿಯೊಳಕ್ಕೆ ನುಗ್ಗುತ್ತಿರುವ ಆನೆಗಳು ಒಟ್ಟು 8 ಮಂದಿಯನ್ನು ಬಲಿ ತೆಗೆದುಕೊಂಡಿವೆ. ಈ ಹಿನ್ನೆಲೆಯಲ್ಲಿ ಭಯಗೊಂಡಿದ್ದ ಜನರು ಈ ಬಾರಿ ಆನೆ ವೀಕ್ಷಣೆಗೆ ಮುಂದಾಗಿಲ್ಲ.
ಅರಣ್ಯ ಅಧಿಕಾರಿಗಳ ಕಟ್ಟುನಿಟ್ಟಿನ ಕ್ರಮಗಳೂ ಜನರನ್ನು ಅರಣ್ಯದತ್ತ ಹೋಗದಂತೆ ಎಚ್ಚರಿಸಿದ್ದವು. ಪರಿಣಾಮ ಅಪಾರ ಬೆಳೆ ಹಾನಿ ಆಗಿದ್ದರೂ ಯಾವುದೆ ಪ್ರಾಣಹಾನಿ ಆಗಿಲ್ಲವೆಂಬುದು ಗಮನಾರ್ಹ ಎಂದು ಅವರು ಹೇಳುತ್ತಾರೆ.
15 ದಿನಗಳ ಕಾಲ ಗ್ರಾಮದ ಕಾಡಿನಲ್ಲಿ ನೆಲೆಯೂರಿದ್ದ ಆನೆ ಹಿಂಡು ಗ್ರಾಮಸ್ಥರ ಬಹುತೇಕ ಬೆಳೆಗಳನ್ನು ನಾಶಪಡಿಸಿವೆ. ಈ ಬಾರಿ ಬಿದ್ದ ಅಲ್ಪಸ್ವಲ್ಪ ಮಳೆಗೆ ಉತ್ತಮ ರಾಗಿ ಇಳುವರಿ ನಿರೀಕ್ಷಿಸಲಾಗಿತ್ತು. ಆದರೆ ಆನೆ ದಾಳಿಯಿಂದ ಅದೆಲ್ಲ ಹುಸಿಯಾಗಿದೆ ಎಂದು ಬತ್ತಲಹಳ್ಳಿ ಗ್ರಾಮದ ವೆಂಕಟೇಶಪ್ಪ ನೊಂದು ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.