ಬೆಂಗಳೂರು: `ಜೀವನದ ಸಂಧ್ಯಾಕಾಲದಲ್ಲಿರುವ ಚಿತ್ರ ಕಲಾವಿದರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಗತ್ಯ ನೆರವು ನೀಡಬೇಕು~ ಎಂದು ಮಾಜಿ ಲೋಕಾಯುಕ್ತ ನ್ಯಾ. ಶಿವರಾಜ್ ಪಾಟೀಲ್ ಹೇಳಿದರು.
ಇಂಡಿಯನ್ ನ್ಯಾಷನಲ್ ಫೋರಂ ಆಫ್ ಆರ್ಟ್ ಅಂಡ್ ಕಲ್ಚರ್ ನಗರದ ಕರ್ನಾಟಕ ಚಿತ್ರಕಲಾ ಪತಿಷತ್ತಿನಲ್ಲಿ ಸೋಮವಾರ ಏರ್ಪಡಿಸಿದ್ದ ನಾಲ್ಕನೇ ಅಖಿಲ ಭಾರತ ಚಿತ್ರಕಲಾ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
`ಅಮೂಲ್ಯ ಕೊಡುಗೆಗಳನ್ನು ನೀಡಿದ ಅನೇಕ ಕಲಾವಿದರು ಜೀವನದ ಕೊನೆಯ ಘಟ್ಟದಲ್ಲಿ ಸಂಕಷ್ಟಗಳನ್ನು ಎದುರಿಸಿದ್ದನ್ನು ನೋಡಿದ್ದೇನೆ. ವಯಸ್ಸಾದ ಕಲಾವಿದರಿಗೆ ಸರ್ಕಾರ ಸಹಾಯ ಮಾಡಬೇಕು. ಕಲೆ ಎಂಬುದು ಎಲ್ಲ ಕಡೆ ಇರುವಂತಹದ್ದು ಅದನ್ನು ಗುರುತಿಸಿ ಬೆಂಬಲಿಸಬೇಕು. ಲಲಿತ ಕಲೆಗಳಿಗೆ ಯಾವುದೇ ಗಡಿಯ ಹಂಗಿಲ್ಲ. ಅದೇ ಅದರ ವೈಶಿಷ್ಟತೆ. ನಮಲ್ಲಿರುವ ಎಲ್ಲ ವಿಧದ ಕಲೆಗಳನ್ನು ಬೆಳೆಸಬೇಕು~ ಎಂದು ಹೇಳಿದರು.
`ಕಲೆಯನ್ನು ಕೇವಲ ನೋಡುವುದಲ್ಲ. ಅದನ್ನು ಅರ್ಥ ಮಾಡಿಕೊಂಡು ಆಸ್ವಾಧಿಸಿದಾಗ ಕಲಾವಿದನ ಅಭಿವ್ಯಕ್ತಿ ಏನೆಂದು ಅನುಭವಕ್ಕೆ ಬರುತ್ತದೆ. ಚಿತ್ರಕಲಾ ಪ್ರದರ್ಶನ ಏರ್ಪಡಿಸಿ ಕಲಾವಿದರಿಗೆ ಅವಕಾಶ ಮಾಡಿಕೊಟ್ಟಿರುವ ಸಂಘದ ಕೆಲಸ ಪ್ರಶಂಸನೀಯ~ ಎಂದರು.
ವಿಜೇತರು: ಕಲಾಕೃತಿ ಸ್ಪರ್ಧೆಯಲ್ಲಿ ಪಶ್ಚಿಮ ಬಂಗಾಳದ ಕಲಾವಿದ ಸುರ್ಜಿತ್ ರಾಯ್ ಪ್ರಥಮ ಬಹುಮಾನ, ಆಂಧ್ರಪ್ರದೇಶದ ಕಲ್ಟ್ಡಿನೊಯ್ ದ್ವಿತೀಯ, ಜಾರ್ಖಂಡ್ನ ಬಿನಿತಾ ಬಂಡೋಪಾಧ್ಯಾಯ ಅವರು ತೃತೀಯ ಹಾಗೂ ಅರ್ನಬ್ಗನ್ ಚೌಧರಿ ಅವರಿಗೆ ವಿಶೇಷ ಬಹುಮಾನ ಲಭಿಸಿತು. ಬಹುಮಾನವು ಕ್ರಮವಾಗಿ 35, 25, 15 ಮತ್ತು 10 ಸಾವಿರ ರೂಪಾಯಿ ನಗದು ಒಳಗೊಂಡಿದೆ.
ಇಂಡಿಯನ್ ನ್ಯಾಷನಲ್ ಫೋರಂ ಆಫ್ ಆರ್ಟ್ ಅಂಡ್ ಕಲ್ಚರ್ನ ಅಧ್ಯಕ್ಷ ರಾಮಕಿಶೋರ್ ಚೌಧರಿ, ಟ್ರಸ್ಟಿ ತಪಶ್ಗನ್ ಚೌಧರಿ, ಎಚ್.ಕೆ. ಕೇಜ್ರಿವಾಲ್ ಮತ್ತು ಬೆಂಗಳೂರು ದೂರದರ್ಶನ ಕೇಂದ್ರದ ಉಪ ಪ್ರಧಾನ ನಿರ್ದೇಶಕ ಡಾ.ಮಹೇಶ್ ಜೋಶಿ ಉಪಸ್ಥಿತರಿದ್ದರು.