ಶತಾಯುಷಿಗಳಾದ ಗುಲ್ಬರ್ಗದ ವಿದ್ಯಾಧರ ಗುರೂಜಿ, ಬೈಲಹೊಂಗಲದ ಸೋಮಲಿಂಗಪ್ಪ ದೊಡವಾಡ, ಹುಕ್ಕೇರಿಯ ಶಿವಪ್ಪ ಉಂಡಾಳಿ ಅವರಂತೂ ಮೆಟ್ರೊ ಸೊಬಗಿಗೆ ಮನಸೋತು ಬಿಟ್ಟಿದ್ದರು. `ಇಂತಹ ಸೌಲಭ್ಯ ಎಲ್ಲ ಕಡೆ ಬರಬೇಕು~ ಎಂದು ಸದಾಶಿವ ಭೋಸಲೆ ಆಶಿಸಿದರು. `ಗದ್ದಲ ಇಲ್ಲ, ಕಾಯುವ ತ್ರಾಸ್ ಇಲ್ಲ, ಬಸ್ಸಿನಂತೆ ಎತ್ತಿ ಒಗೆಯುವುದಿಲ್ಲ; ಇಂತಹ ವ್ಯವಸ್ಥೆ ಯಾರಿಗೆ ಬೇಡ ಹೇಳ್ರಿ~ ಎಂದು ಬೆರಗಿನಿಂದ ಕೇಳಿದವರು ಹುದಲಿಯ ಎಂ.ಬಿ. ದೇಸಾಯಿ.
`ನಾನು ಬಹಳ ಕಡೆ ಮೆಟ್ರೊ ಸೌಲಭ್ಯ ನೋಡಿದ್ದೇನೆ. ಬೆಂಗಳೂರಿನಲ್ಲಿ ಒಳ್ಳೆಯ ಸೌಕರ್ಯ ಕಲ್ಪಿಸಿದ್ದಾರೆ~ ಎಂದು ಬೆನ್ನು ತಟ್ಟಿದವರು ಪಾಟೀಲ ಪುಟ್ಟಪ್ಪ. ಕೆಲವು ಹಿರಿಯ ಜೀವಗಳಿಗೆ ದಶಕಗಳ ಹಿಂದೆ ಗಾಂಧೀಜಿ ಅವರನ್ನು ಭೇಟಿಯಾಗಲು ರೈಲಿನಲ್ಲಿ ಪ್ರಯಾಣಿಸಿದ್ದ ನೆನಪು ಕಾಡಿತು. ಎಲ್ಲರೂ ಮೆಟ್ರೊದಲ್ಲಿ ಬೈಯ್ಯಪ್ಪನಹಳ್ಳಿಯಿಂದ ಎಂ.ಜಿ. ರಸ್ತೆವರೆಗೆ ಒಂದು ಸುತ್ತು ಹೋಗಿಬಂದರು. ಮೆಟ್ರೊ ಮೇಲೆ ಹೊಗಳಿಕೆ ಸುರಿಮಳೆ ಸುರಿಸುತ್ತಾ ಗಾಂಧಿ ಭವನದತ್ತ ತೆರಳಿದರು.